ನವದೆಹಲಿ: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ತಾಂತ್ರಿಕ ದೋಷದಿಂದ ಆಗಿಲ್ಲ. ಬದಲಾಗಿ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್ ಆಫ್ ಮಾಡಿದ್ದರು ಎನ್ನುವ ಆಘಾತಕಾರಿ ವಿಷಯ ಹೊರಬಿದ್ದಿದೆ.
ಇಟಲಿಯ ಪತ್ರಿಕೆಯೊಂದು ತನಿಖಾ ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ, ಇಟಲಿಯ ಕೊರಿಯರ್ ಡೆಲ್ಲಾ ಸೆರಾ ಮಾಧ್ಯಮ ಈ ಕುರಿತು ವರದಿ ಮಾಡಿದೆ. ಈ ವರದಿ ಪ್ರಕಾರ, 260 ಜನರನ್ನು ಬಲಿ ಪಡೆದ ಏರ್ಇಂಡಿಯಾ ವಿಮಾನದ ಪೈಲಟ್ ಸುಮೀತ್ ಸಬರ್ವಾಲ ಉದ್ದೇಶಪೂರ್ವಕವಾಗಿ ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದಕ್ಕೆ ದುರಂತ ಸಂಭವಿಸಿದೆ. ಈ ಕುರಿತು ತನಿಖಾ ಸಂಸ್ಥೆಗಳ ಮೂಲಗಳು ಖಚಿತಪಡಿಸಿವೆ ಎಂದು ವರದಿ ಮಾಡಿದೆ.
ಆದರೆ ಈ ವರದಿಯಲ್ಲಿ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ವಿಮಾನ ಅಪಘಾತ ತನಿಖಾ ಸಂಸ್ಥೆ ತಳ್ಳಿಹಾಕಿದ್ದು, ಇನ್ನೂ ತನಿಖೆ ನಡೆಯುತ್ತಿದೆ. ಈವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ವಿದೇಶಿ ಪತ್ರಿಕೆಯ ವರದಿಯು ಕಪೋಲಕಲ್ಪಿತವಾಗಿದ್ದು, ಯಾವುದೇ ಹುರುಳಿಲ್ಲ ಎಂದು ಹೇಳಿದೆ.
ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಬೋಯಿಂಗ್ 787 ವಿಮಾನವು ಟೆಕ್ ಆಫ್ ಆದ ಕೆಲ ಸಮಯದಲ್ಲೇ ಅಹಮದಾಬಾದ್ನ ವೈದ್ಯಕೀಯ ಕಾಲೇಜು ಹಾಸ್ಟೆಲ್ಗೆ ಅಪ್ಪಳಿಸಿತ್ತು. 270 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್ಗಳ ನಡುವಿನ ಸಂಭಾಷಣೆ ರೆಕಾರ್ಡ್ ಆಗಿದ್ದು, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ಗೆ ‘ಏಕೆ ಕಟ್ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಇನ್ನೊಬ್ಬ ಪೈಲಟ್, ‘ನಾನು ಹಾಗೆ ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ.






















