ಕಲಬುರಗಿ: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ೨೦೩ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ೬ಕ್ಕೆ ಸಾವಿರಾರು ಭಕ್ತವೃಂದ ಜೈಘೋಷದೊಂದಿಗೆ ಸಂಭ್ರಮದ ರಥೋತ್ಸವ ನಡೆಯಿತು.
ಶರಣಬಸವೇಶ್ವರ ದೇವಾಲಯ ಸಂಕೀರ್ಣದಲ್ಲಿ ರಥೋತ್ಸವದ ಸಮಯದಲ್ಲಿ ವರ್ಷಕ್ಕೊಮ್ಮೆ ಪ್ರದರ್ಶಿಸಲಾಗುವ ಪ್ರಸಾದ ಬಟ್ಟಲನ್ನು ರಥೋತ್ಸವದ ಆರಂಭವನ್ನು ಸೂಚಿಸಲು ೮ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಹಾಗೂ ೯ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಪ್ರದರ್ಶಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ಜಾತ್ರಾ ಮಹೋತ್ಸವಕ್ಕೆ ನಾಡಿನ ಭಕ್ತರು ಸಾಕ್ಷಿಯಾಗಿದ್ದರು. ನಸುಕಿನಿಂದಲೇ ಭಕ್ತರ ದಂಡು ದೇವಾಲಯಕ್ಕೆ ಆಗಮಿಸಿ ಸಾಲುಗಟ್ಟಿ ನಿಂತು ಕಾಯಿ ಕರ್ಪೂರ ಅರ್ಪಿಸಿ ನೈವೇದ್ಯ ಸಲ್ಲಿಸಿ ಮಹಾಸಮಾಧಿಯ ದರ್ಶನ ಪಡೆದರು. ಶರಣನ ಮಹಾಸಮಾಧಿ ಪಕ್ಕದಲ್ಲಿಯೇ ಇರುವ ದೊಡ್ಡಪ್ಪ ಅಪ್ಪ ಅವರ ಸಮಾಧಿಯನ್ನೂ ಕಣ್ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ನಗರದ ವಿವಿಧೆಡೆ ಏರ್ಪಡಿಸಿದ್ದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳಗಳ ಪೈಕಿ ಒಂದಾಗಿರುವ ಶರಣಬಸವೇಶ್ವರ ಸಂಸ್ಥಾನವು ಜಾತ್ರೆಯ ಪ್ರಯುಕ್ತ ಹಲವು ದಿನಗಳಿಂದ ಸಕಲ ಸಿದ್ಧತೆ ಕೈಗೊಂಡಿತ್ತು. ರಥೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.