ರಾಜ್ಯದಲ್ಲಿ ಡೀಸೆಲ್ ದರ ಲೀಟರಿಗೆ ₹2 ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ದರವು ಪ್ರತಿ ಲೀಟರ್ಗೆ ‘2’ ರೂಪಾಯಿ ಹೆಚ್ಚಳವಾಗಲಿದ್ದು ನಾಡಿನ ಜನಸಾಮಾನ್ಯರಿಗೆ ಈ ದರ ಏರಿಕೆಯ ಬಿಸಿ ನೇರವಾಗಿ ತಟ್ಟಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಡೀಸೆಲ್ ದರ ಲೀಟರಿಗೆ ₹2 ಏರಿಕೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ” ಎಂಬ ಆತಂಕದ ಪರಿಸ್ಥಿತಿ ನಾಡಿನ ಜನಸಾಮಾನ್ಯರಲ್ಲಿ ಮನೆಮಾಡಿದೆ. ಬೆಲೆ ಏರಿಕೆಯ ದಂಡ ನಿರಂತರ ಪ್ರಯೋಗಿಸುತ್ತಿರುವ ನಿಷ್ಪ್ರಯೋಜಕ ಕಾಂಗ್ರೆಸ್ ಸರ್ಕಾರ ಎಂದಿನಂತೆ ಜನರ ಬದುಕನ್ನು ಹಿಂಡುವುದನ್ನು ಮುಂದುವರೆಸಿದೆ. ತನ್ನ ಖಾಲಿ ಖಜಾನೆ ತುಂಬಿಸಿಕೊಳ್ಳಲು ಡೀಸೆಲ್ ಮಾರಾಟ ತೆರಿಗೆಯನ್ನು ದಿಡೀರ್ ಹೆಚ್ಚಿಸಿರುವುದರಿಂದ ರಾಜ್ಯದಲ್ಲಿ ಡೀಸೆಲ್ ದರವು ಪ್ರತಿ ಲೀಟರ್ಗೆ ‘2’ ರೂಪಾಯಿ ಹೆಚ್ಚಳವಾಗಲಿದ್ದು ನಾಡಿನ ಜನಸಾಮಾನ್ಯರಿಗೆ ಈ ದರ ಏರಿಕೆಯ ಬಿಸಿ ನೇರವಾಗಿ ತಟ್ಟಲಿದೆ.
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ನಿತ್ಯವೂ ಒಂದಿಲ್ಲೊಂದು ದರ ಏರಿಸಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ.
ಹಾಲು, ಮೊಸರು, ವಿದ್ಯುತ್,ಆಟೋ ಮೊಬೈಲ್ ಪಾರ್ಟ್ಸ್, ಬೆಂಗಳೂರಿನಲ್ಲಿ ಕಸದ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಫಿಡವಿಟ್ ಛಾಪಾ ಕಾಗದ, ಎಟಿಎಂ ಚಾರ್ಜ್ ಸೇರಿದಂತೆ ಜನರ ದೈನಂದಿನ ಬದುಕಿನ ಮೇಲೆ ಹೊರೆ ಹೊರಿಸಿದ್ದ ರಾಜ್ಯ ಸರ್ಕಾರ ಇದೀಗ ಡೀಸೆಲ್ ದರ ಹೆಚ್ಚಿಸಿರುವುದು ಇನ್ನುಮುಂದೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಈ ಬೆಲೆ ಏರಿಕೆಯ ಬಿಸಿ ಪಂಪ್ ಸೆಟ್, ಟ್ರಾಕ್ಟರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ. ಅದರ ಜೊತೆಗೆ ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಇದರ ಬಿಸಿ ತಟ್ಟಲಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ.
ಡೀಸೆಲ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಕರ್ನಾಟಕ ಬಿಜೆಪಿ ದರ ಹಿಂಪಡೆಯುವವರೆಗೂ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಎಚ್ಚರಿಸುತ್ತದೆ ಎಂದಿದ್ದಾರೆ.