ಬೆಂಗಳೂರು: ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿ ಪತ್ರ ಈಗ ಕಸದ ಬುಟ್ಟಿಗೆ ಸೇರಿದ್ದು ಸಿದ್ಧರಾಮಯ್ಯನವರ ದುರಹಂಕಾರದ ಪರಮಾವಧಿಯನ್ನು ಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಇದೇ ಜುಲೈ 10ಕ್ಕೆ ಅಭಿನಂದನಾ ಸಮಾರಂಭಕ್ಕೆಂದು ಚಾಮರಾಜನಗರಕ್ಕೆ ಹೋದಾಗ ಅಲ್ಲಿನ ರೈತರು, ನಾಡಿನ ಸಮಸ್ತ ರೈತರ ಪರವಾಗಿ ರೈತರ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ನೀಡಿದ್ದ ಮನವಿ ಪತ್ರ ಈಗ ಕಸದ ಬುಟ್ಟಿಗೆ ಸೇರಿರುವುದು ಸಿದ್ಧರಾಮಯ್ಯನವರ ದುರಹಂಕಾರದ ಪರಮಾವಧಿಯನ್ನು ಬಿಂಬಿಸುತ್ತದೆ. ಕಾಂಗ್ರೆಸ್ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿರುವುದು ಕರ್ನಾಟಕದಲ್ಲಿಯೂ ಅವರಿಗೆ ಭವಿಷ್ಯವಿಲ್ಲ ಎಂದು ಅರಿವಾಗಿರುವುದರಿಂದ ಸಾಲು ಸಾಲು ಹಗರಣ ಮಾಡಿ ರೈತರೂ ಸೇರಿದಂತೆ ನಾಡಿನ ಜನರ ಬೇಕು ಬೇಡಗಳಿಗೆ ಸ್ಪಂದಿಸದೆ ಹೀಗಾಡುತ್ತಿದ್ದಾರೆ. ಇಂಥವರು ಅಧಿಕಾರದಲ್ಲಿರುವುದು ನಾಡಿಗೆ ಅಪಾಯಕಾರಿ. ಅವರು ಈಗಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.