ಹುಬ್ಬಳ್ಳಿ: ಬಿಜೆಪಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ನೀಡಿದ್ದರೆ, ನಾಳೆಯೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದಿಲ್ಲ. ಬದಲಿಗೆ ಹಿಂದು-ಮುಸ್ಲಿಂ ಎಂದು ಹೇಳಿ ಅವರು ಮತಗಳನ್ನು ಪಡೆದರೆ, ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತಗಳನ್ನು ಕೇಳುತ್ತೇವೆ ಎಂದರು.
ಎಪ್ರಿಲ್ ೧೭ ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರಾಜ್ಯದಾದ್ಯಂತ ೪೨,೩೪೫ ಮನೆಗಳನ್ನು ಉದ್ಘಾಟಿಸುವ ಯೋಚನೆ ನಮಗಿತ್ತು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸುತ್ತಿರುವುದರಿಂದ ಮನೆಗಳ ಉದ್ಘಾಟನೆ ಐದರಿಂದ ಆರು ದಿನ ವಿಳಂಬವಾಗಬಹುದು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ೧,೮೦,೨೫೩ ಮನೆಗಳ ನಿರ್ಮಾಣ ಮಾಡುವಂತೆ ಘೋಷಿಸಿದ್ದರು. ಅದರಂತೆ ಕಳೆದ ವರ್ಷ ೩೬ ಸಾವಿರ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ. ಈ ವರ್ಷ ೪೨,೩೫೩ ಮನೆಗಳನ್ನು ಉದ್ಘಾಟಿಸುತ್ತಿದ್ದೇವೆ ಎಂದರು.