ಖರ್ಗೆ ಹೇಳಿಕೆಗೆ ಆಕ್ಷೇಪ

0
39

ಉಡುಪಿ: ಕುಂಭಮೇಳದಲ್ಲಿ ಸ್ನಾನ‌ ಮಾಡಿದರೆ ದೇಶದ ಬಡತನ ಹೋಗುವುದಿಲ್ಲ ಎಂಬ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬೇಜಾವಾಬ್ದಾರಿಯುತವಾದುದು. ರಾಜ್ಯ, ರಾಷ್ಟ್ರದ ದೊಡ್ಡ ನಾಯಕನಿಗೆ ಇದು ಶೋಭೆ ತರುವುಲ್ಲ. ಇದು ಖರ್ಗೆಯ ಪ್ರಾಯದೋಷದ ಹೇಳಿಕೆಯೋ ಅಥವಾ ಕಾಂಗ್ರೆಸ್‌ ಪ್ರೇರಿತ ಹೇಳಿಕೆಯೋ ಗೊತ್ತಾಗುತ್ತಿಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ. ಮೋದಿ, ಅಮಿತ್ ಶಾ ನೂರು ಜನ್ಮ ಎತ್ತಿದರೂ ಸ್ವರ್ಗಕ್ಕೆ ಹೋಗುವುದಿಲ್ಲ, ನರಕಕ್ಕೇ ಹೋಗುತ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
ದೇಶದ ಕೋಟ್ಯಂತರ ಜನರು ಹಾಗೂ ವಿದೇಶದ ಅನೇಕ ಮಂದಿ ಮಹಾಕುಂಭಮೇಳದಲ್ಲಿ ಭಾಗಿಯಾಗಬೇಕು ಎಂಬ ಹಂಬಲದಲ್ಲಿದ್ದಾರೆ. ಆದರೆ, ಖರ್ಗೆ ಹೇಳಿಕೆ ವಿಶ್ವದ ಜನರನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಖರ್ಗೆಯವರ ಪ್ರಾಯದೋಷದ ಹೇಳಿಕೆಯಾಗಿದ್ದರೆ ಕಾಂಗ್ರೆಸ್‌ನ ಇತರ ನಾಯಕರು ಸ್ಪಷ್ಟನೆ ಕೊಡಬೇಕು ಎಂದು ಶಾಸಕ ಯಶಪಾಲ್ ಒತ್ತಾಯಿಸಿದರು.
‘ಖರ್ಗೆಯವರೇ ನೀವು ಹಿರಿಯರು, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ, ದೇಶದ ಜನ ಇದನ್ನು ಸಹಿಸುವುದಿಲ್ಲ. ಸಾರ್ವಜನಿಕವಾಗಿ ನೀವು ಕ್ಷಮೆ ಕೋರಬೇಕು. ಹಿಂದೂ ಧರ್ಮ ಏನು ಎಂದು ಗೊತ್ತಿಲ್ಲದವರು ಸ್ವರ್ಗ-ನರಕದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಆಚಾರ-ವಿಚಾರ ಗೊತ್ತಿಲ್ಲದೆ ಸ್ವರ್ಗದ ವಿಚಾರ ಮಾತನಾಡುವ ನೈತಿಕತೆ ನಿಮಗಿಲ್ಲ’ ಎಂದು ಯಶಪಾಲ್ ಟೀಕಿಸಿದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಖರ್ಗೆಯವರು ಇಂಥ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವದ ಜನ, ಪ್ರಧಾನಿ ಮೋದಿಯವರನ್ನು ಒಪ್ಪಿದ್ದಾರೆ. ಮೋದಿ, ಅಮಿತ್ ಶಾ ಏಳಿಗೆ ಮತ್ತು ನಾಯಕತ್ವ ಒಪ್ಪದವರು ಇಂಥ ಹೇಳಿಕೆ ಕೊಡುತ್ತಾರೆ. ಇದು ಖಂಡನೀಯ. ಮೋದಿ, ಅಮಿತ್ ಶಾರಂಥ ನಾಯಕರು ಮುಂದಿನ ದಿನಗಳಲ್ಲಿ ದೇಶಕ್ಕೆ ಲಭಿಸುವುದು ಕಷ್ಟಸಾಧ್ಯ. ಮೋದಿಯವರ ಆಡಳಿತ ವೈಖರಿ, ದೂರದರ್ಶಿತ್ವ ಯೋಜನೆಗಳು ದೇಶಕ್ಕೆ ಅಗತ್ಯ ಇದೆ ಎಂದು ಯಶಪಾಲ್ ಪ್ರತಿಪಾದಿಸಿದರು.

Previous articleಹೆಜ್ಜೇನು ದಾಳಿಗೆ 40ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Next articleಅನಿಲ ಸೋರಿಕೆಯಿಂದ ಕಾರ್ಮಿಕ ಸಾವು