ಅಪಾಯದಲ್ಲಿರುವ ಮರದ ಸೇತುವೆಯಲ್ಲೇ ಶಾಲಾ ಮಕ್ಕಳ ಓಡಾಟ

ಮೂಡುಬಿದಿರೆ: ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿದ್ದ ಸೇತುವೆಯೊಂದನ್ನು ಮರು ನಿರ್ಮಾಣ ಮಾಡಲು ಪ್ರಾಕೃತಿಕ ವಿಕೋಪ ಪರಿಹಾರದಡಿಯಲ್ಲಿ ಸಿಗಬೇಕಾಗಿದ್ದ ಅನುದಾನ ಬಿಡುಗಡೆಯಾಗದಿರುವುದರಿಂದ ಅಪಾಯದಲ್ಲಿರುವ ತಾತ್ಕಾಲಿಕ ಮರದ ಸೇತುವೆಯಲ್ಲೇ ಶಾಲಾ ಮಕ್ಕಳು ಓಡಾಟ ಮಾಡಬೇಕಾಗಿದೆ.
ತಾಲೂಕಿನ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದಲ್ಲಿ ಬೋರುಗುಡ್ಡೆ-ನಂದೊಟ್ಟು, ಉಮಿಲುಕ್ಕು-ಪಣಪಿಲಕ್ಕೆ ಸಂಪಕ೯ ಕಲ್ಪಿಸಲು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಬಿರ್ಮರಬೈಲು ಸೇತುವೆಯು ಕಳೆದ ಜುಲೈ ತಿಂಗಳಲ್ಲಿ ಬೀಸಿದ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು ಇದರಿಂದಾಗಿ ಸಂಪರ್ಕ ಕಡಿತವಾಗಿ ಸುತ್ತಮುತ್ತದ ಪ್ರದೇಶಕ್ಕೆ ಹೋಗುವ ಸಾರ್ವಜನಿಕರು, ಶಾಲೆಗೆ ಹೋಗುವ ಮಕ್ಕಳು 4-5 ಕಿಮೀ ಸುತ್ತು ಬಳಸಿ ಹೋಗಬೇಕಾಗಿತ್ತು.
ಅಲ್ಲದೆ ನಂದೊಟ್ಟು ಪರಿಸರದವರು ದರೆಗುಡ್ಡೆ ಪಂಚಾಯತ್, ಸೊಸೈಟಿಗೆ ಹೋಗುವವರು ಬೋರುಗುಡ್ಡೆ ಅಳಿಯೂರು ಮಾರ್ಗವಾಗಿ ಸಂಚರಿಸುವಂತ್ತಾಗಿತ್ತು ಈ ಹಿನ್ನೆಲೆಯಲ್ಲಿ ಸೇತುವೆ ಕೊಚ್ಚಿ ಹೋದ ಎರಡೇ ವಾರದಲ್ಲಿ ಊರಿನವರು, ದರೆಗುಡ್ಡೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿ ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.
ಸೇತುವೆ ಕೊಚ್ಚಿ ಹೋಗಿದ್ದ ಸಂದಭ೯ದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಉಮಾನಾಥ ಕೋಟ್ಯಾನ್ ಅವರು ಆದಷ್ಟು ಬೇಗ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಅದರಂತೆ ಕಾಂಗ್ರೆಸ್ ಮುಖಂಡರುಗಳು ಭೇಟಿ ನೀಡಿ ತಾವೇನು ಕಡಿಮೆಯಿಲ್ಲ ತಮ್ಮದೇ ಸರಕಾರ ಇರುವುದೆಂದು ತಾವೂ ಜನರಿಗೆ ಭರವಸೆ ನೀಡಿ ಬಂದಿದ್ದರು. ಆದರೆ ಈವರೆಗೆ ಯಾರ ಭರವಸೆಯೂ ಈಡೇರದೆ ಅಪಾಯದಂಚಿನಲ್ಲಿರುವ ತಾತ್ಕಾಲಿಕ ಮರದ ಸೇತುವೆಯಲ್ಲಿಯೇ ಸಾವ೯ಜನಿಕರು, ಶಾಲಾ ಮಕ್ಕಳು ಓಡಾಟ ಮಾಡುತ್ತಿದ್ದಾರೆ.
ಮುಂದಿನ ಮಳೆಗಾಲಕ್ಕೆ ಮುಂಚಿತವಾಗಿ ಹೊಸ ಸೇತುವೆ ನಿಮಾ೯ಣವಾಗದಿದ್ದರೆ ಇದೀಗ ಇರುವ ಮರದ ಸೇತುವೆಯೂ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳೀಯರಿದ್ದಾರೆ.
ಈ ಬಗ್ಗೆ ಶಾಸಕ ಕೋಟ್ಯಾನ್ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಅನುದಾನ ಇನ್ನೂ ಬಿಡುಗಡೆಯಾಗದಿರುವುದರಿಂದ ಸಮಸ್ಯೆಯಾಗಿದೆ. ಹಾಗಾಗಿ ಶಾಸಕರ ನಿಧಿಯಲ್ಲಿ ಅನುದಾನ ಕಾಯ್ದಿರಿಸಿ ಒಂದು ತಿಂಗಳೊಳಗೆ ಮಂಜೂರಾತಿಗೆ ಕ್ರಮ ವಹಿಸಲಾಗುವುದೆಂದು ತಿಳಿಸಿದ್ದಾರೆ.