ಸ್ವಂತ ಬಾವಿಯಿಂದ ಊರಿಗೆಲ್ಲ ನೀರು: ಅಕ್ಷಯ ಪಾತ್ರೆಯಾದ ಬಾವಿ

0
19

ಶತಮಾನದ ಬಾವಿ ಬತ್ತಿದ ದಾಖಲೆಯೇ ಇಲ್ಲ


ನೀರಿಲ್ಲದೆ ಕಂಗಾಲಾಗಿರುವ ರಬಕವಿ-ಬನಹಟ್ಟಿ ನಗರಸಭೆಯ ಹೊಸೂರು ಪಟ್ಟಣದ ಸಾವಿರಾರು ಕುಟುಂಬಗಳಿಗೆ ನೀರು ತಲುಪಿಸುವ ಮೂಲಕ ಧರೆಪ್ಪ ಉಳ್ಳಾಗಡ್ಡಿ ಮಾದರಿಯಾಗಿದ್ದಾರೆ.
ಎಲ್ಲೆಡೆ ಬಾವಿಯಿಂದ ಪೈಪ್‌ಲೈನ್‌ದೊಂದಿಗೆ ಟ್ಯಾಂಕರ್ ಮೂಲಕ ಸಾಗಿಸುವದನ್ನು ನೋಡಿದ್ದೀರಿ. ಆದರೆ ಈ ವ್ಯಕ್ತಿ ತಮ್ಮ ಬಾವಿಯಲ್ಲಿ ನಾಲ್ಕು ಮೋಟಾರ್‌ಗಳನ್ನು ಅಳವಡಿಸಿ ನಗರಸಭೆಯ ಮುಖ್ಯ ಪೈಪ್‌ಲೈನ್‌ಗೆ ಸಂಪರ್ಕ ನೀಡಿ ನಿರಂತರ ನೀರು ಒದಗಿಸುವ ಮೂಲಕ ಇಡೀ ಗ್ರಾಮದ ನೀರಿನ ಭವಣೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು ನಿಜಕ್ಕೂ ಅಕ್ಷಯ ಪಾತ್ರೆಯೇ ಸರಿ.
ಇಲ್ಲಿನ ಸ್ಥಳೀಯ ನಗರಸಭೆ ಮಾಡಬೇಕಿದ್ದ ಕೆಲಸವನ್ನು ಯಾವದೇ ಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ತೋಟದ ಬಾವಿಯ ನೀರನ್ನು ಹೀಗೆ ಪೈಪ್‌ಲೈನ್ ಮೂಲಕ ಸರ್ಕಾರಿ ನಳಗಳಿಂದಲೇ ಸರಬರಾಜು ಮಾಡುವ ವಿಧಾನ ಎಲ್ಲಿಯೂ ಕೇಳರಿಯದ ರೀತಿಯಲ್ಲಿ ವ್ಯವಸ್ಥಿತವಾಗಿ ಮಾಡಿರುವದು ವಿಶೇಷ. ಈ ಬಾವಿಗೆ ಭೆಟ್ಟಿ ನೀಡಿದ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಇಂತಹ ಅಪರೂಪದ ಬಾವಿಯೊಂದಿಗೆ ಇಡೀ ಹೊಸೂರ ಪಟ್ಟಣಕ್ಕೆ ನೀರು ಪೂರೈಕೆ ಆಶ್ಚರ್ಯ ತಂದಿದೆ.
ನೀರನ್ನು ಮಿತವ್ಯಯವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಶತಮಾನದ ಬಾವಿ
ನೂರು ವರ್ಷದಷ್ಟು ಹಳೆಯದಾಗಿರುವ ಈ ಬಾವಿಯನ್ನು ಎಂದಿಗೂ ಬತ್ತಿರುವದನ್ನು ಕಂಡಿಲ್ಲವೆನ್ನುತ್ತಾರೆ ಗ್ರಾಮದ ಹಿರಿಯ ಜೀವಿಗಳು. ಈಗಲೂ ನಿರಂತರ ಬಳಕೆಯಿಂದ ಬಾವಿಯಲ್ಲಿನ ನೀರು ಮತ್ತೇ ಅದೇ ಪ್ರಮಾಣದಲ್ಲಿ ಪೂರ್ತಿ ವರ್ಷ ಕಾಣಸಿಗುವದು ವಿಶೇಷ.
2000 ಕುಟುಂಬಕ್ಕೆ ಸಹಾಯ
ಹೊಸೂರು ಪಟ್ಟಣದ ಸುಮಾರು 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕೃಷ್ಣಾ ನದಿಯಿಂದ ನಗರಸಭೆ ಸರಬರಾಜು ಮಾಡುವ ಮಾದರಿಯಲ್ಲಿಯೇ ಈ ಬಾವಿಯಿಂದ ನೇರ ಪೈಪ್‌ಲೈನ್ ಮೂಲಕ ಎಲ್ಲ ಮನೆಗಳಿಗೆ ತಲುಪುವಂತೆ ಮಾಡಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಗುವಲ್ಲಿ ಕಾರಣವಾಗಿದೆ.

Previous articleನದಿ ಬತ್ತಿದಾಗ ಮಾತ್ರ ಗೋಚರಿಸುವ ಈಶ್ವರ…!
Next articleವಿಚ್ಛೇದನ ಪಡೆದ ಪತ್ನಿ ಕೊಲ್ಲಲು ಸಂಚು ರೂಪಿಸಿದ್ದ ಮಾಜಿ ಪತಿ ಅರೆಸ್ಟ್ !