ಬೆಂಗಳೂರು: ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ ಎಂದು ಘೋಷಣೆ ಮಾಡಿರುವುದು ಅತ್ಯಂತ ಸೂಕ್ತ ಮತ್ತು ಸ್ವಾಗತಾರ್ಹ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಇತಿಹಾಸದ ಅರಿವಿಲ್ಲದವರು ಇತಿಹಾಸ ಸೃಷ್ಟಿಸಲಾರರು. ಇತಿಹಾಸದಿಂದ ಪಾಠ ಕಲಿಯದಿದ್ದರೆ ಇತಿಹಾಸ ಮರುಕಳಿಸತ್ತದೆ. ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಪಕ್ಷ ಇವತ್ತು ಸಂವಿಧಾನ ರಕ್ಷಿಸುವ ಮುಖವಾಡ ಹಾಕಿಕೊಂಡು ಜನರನ್ನ ಮರಳು ಮಾಡಲು ಹೊರಟಿದೆ. ಅಸಾಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿ ದೇಶದ ಪರ ಧ್ವನಿ ಎತ್ತಿದ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆದ ಆ ದಿನಗಳು ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವೂ ಹೌದು, ವರ್ತಮಾನ ಹಾಗು ಭವಿಷ್ಯದಲ್ಲಿ ನಾವು ಕಲಿಯಬೇಕಾದ ಅತ್ಯಂತ ದೊಡ್ಡ ಪಾಠವೂ ಹೌದು. ಕಾಂಗ್ರೆಸ್ನ ಪಕ್ಷ ಸಂವಿಧಾನದ ಕಗ್ಗೊಲೆ ಮಾಡಿದ ದಿನವನ್ನು ಎಂದಿಗೂ ಮರೆಯದಿರೋಣ. ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ ಎಂದು ಘೋಷಣೆ ಮಾಡಿರುವುದು ಅತ್ಯಂತ ಸೂಕ್ತ ಮತ್ತು ಸ್ವಾಗತಾರ್ಹ. ಈ ನಿರ್ಣಯ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿನಂದನಾರ್ಹರು ಎಂದಿದ್ದಾರೆ.