Home Advertisement
Home ತಾಜಾ ಸುದ್ದಿ ಮತಾಂಧರ ಧೈರ್ಯಕ್ಕೆ ಕಾಂಗ್ರೆಸ್‌ನ ಪರೋಕ್ಷ ಸಹಕಾರವೇ ಕಾರಣ

ಮತಾಂಧರ ಧೈರ್ಯಕ್ಕೆ ಕಾಂಗ್ರೆಸ್‌ನ ಪರೋಕ್ಷ ಸಹಕಾರವೇ ಕಾರಣ

0
114

ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಗೆ ಸಂಬಂಧಿಸಿದಂತೆ, ಮತೀಯವಾದಿಗಳು ಒಂದು ತಿಂಗಳ ಹಿಂದೆಯೇ ಕೊಲ್ಲುತ್ತೇವೆಂದು ಹಾಗೂ ಹತ್ಯೆಯ ನಂತರ ಫಿನಿಶ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಮತಾಂಧರ ಈ ಧೈರ್ಯಕ್ಕೆ ಕಾಂಗ್ರೆಸ್ ಸರ್ಕಾರದ ಪರೋಕ್ಷ ಸಹಕಾರವೇ ಕಾರಣವೆಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸಮಾಜ ಕಾರ್ಯಕರ್ತನೊಬ್ಬನನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ರಾಜ್ಯದ ಗೃಹ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಓಲೈಕೆ ರಾಜಕಾರಣದ ಮುಂದುವರಿದ ಭಾಗವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಿಂದೂ ನಾಯಕರನ್ನು ಕಡೆಗಣಿಸಿ ಕೇವಲ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ. ಇವರು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಚಿವರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂತಹ ಹಿಂದೂ ವಿರೋಧಿ ಸರ್ಕಾರದಿಂದ ಸುಹಾಸ್ ಶೆಟ್ಟಿ ಸಾವಿಗೆ ನ್ಯಾಯ ಸಾಧ್ಯವಿಲ್ಲ. ಕೂಡಲೇ ಈ ತನಿಖೆಯನ್ನು ಎನ್.ಐ.ಗೆ ವಹಿಸಬೇಕು ಮತ್ತು ಪೊಲೀಸ್ ಇಲಾಖೆ ಸುಹಾಸ್ ಶೆಟ್ಟಿಯನ್ನು ಠಾಣೆಗೆ ಕರೆಸಿ ಯಾವುದೇ ಆಯುಧಗಳನ್ನು ಇಟ್ಟುಕೊಳ್ಳದೇ ತಿರುಗಾಡುವಂತೆ ಹೇಳಿದ ನಂತರವೇ ಈ ಕೊಲೆಯಾಗಿದ್ದು ಸರ್ಕಾರವೇ ಇದರ ನೇರ ಹೊಣೆಯನ್ನು ಹೊರಬೇಕು ಮತ್ತು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸ್ಪೀಕರ್ ಅವರಂತೂ ಪೊಲೀಸ್ ತನಿಖೆಗೂ ಮುನ್ನವೇ ಈ ಕೊಲೆ ಪ್ರಕರಣದಲ್ಲಿ ಫಾಝಿಲ್ ಕುಟುಂಬದ ಕೈವಾಡವಿಲ್ಲ, ಇದೊಂದು ಕೇವಲ ಗ್ಯಾಂಗ್ ವಾರ್ ಎಂದು ಹೇಳಿದ್ದು ಇದೀಗ ಫಾಝಿಲ್ ಸಹೋದರನೇ ಈ ಕೊಲೆಯ ಸೂತ್ರಧಾರಿ ಎಂಬುದು ಬಹಿರಂಗವಾಗಿದ್ದು ಸ್ಪೀಕರ್ ರವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.

Previous articleಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಇಬ್ಬರು ನೀರುಪಾಲು
Next articleಹುಬ್ಬಳ್ಳಿ: ಎನ್‌ಕೌಂಟರ್‌ಗೆ ಬಲಿಯಾದ ರಿತೇಶ ಶವ ಕೊನೆಗೂ ಅಂತ್ಯಕ್ರಿಯೆ