Home Advertisement
Home ಸಿನಿ ಮಿಲ್ಸ್ ʻಧುರಂಧರ್‌ʼ ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: ಆಗಿದ್ದೇನು?

ʻಧುರಂಧರ್‌ʼ ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: ಆಗಿದ್ದೇನು?

0
34

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್‌ಗೆ ಅಪರಿಚಿತರಿಂದ ಜೀವ ಬೆದರಿಕೆ ಸಂದೇಶ ಬಂದಿದ್ದು, ಚಿತ್ರರಂಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಟ್ಸ್‌ಆ್ಯಪ್ ಮೂಲಕ ವಾಯ್ಸ್ ನೋಟ್ ಕಳುಹಿಸಿರುವ ಕಿಡಿಗೇಡಿಗಳು, ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಮುಂಬೈ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹಾಗೇ ಮುಂಬೈ ಅಪರಾಧ ವಿಭಾಗದ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಬೆದರಿಕೆಯ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಅಲ್ಲದೆ ಈ ಹಿಂದೆ ಸಲ್ಮಾನ್ ಖಾನ್ ಸೇರಿದಂತೆ ಹಲವು ಗಣ್ಯರಿಗೆ ಈ ಗ್ಯಾಂಗ್ ಬೆದರಿಕೆ ಹಾಕಿದ್ದ ನಿದರ್ಶನಗಳಿವೆ. ಸದ್ಯ ಮುಂಬೈನ ಬಾಂದ್ರಾ ಭಾಗದಲ್ಲಿರುವ ರಣವೀರ್ ಸಿಂಗ್ ನಿವಾಸದ ಸುತ್ತ ಪೊಲೀಸ್ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ರಣವೀರ್‌ಗೆ ಬೆದರಿಕೆ ಬಂದಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. “ನಾವು ತಾಂತ್ರಿಕ ತಂಡದ ಸಹಾಯದೊಂದಿಗೆ ಬೆದರಿಕೆ ಸಂದೇಶ ಬಂದಿರುವ ಮೂಲವನ್ನು ಪತ್ತೆಹಚ್ಚುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೆಡೆ ಬೆದರಿಕೆ ಕರೆಗಳು ಆತಂಕ ತಂದಿದ್ದರೆ, ಇನ್ನೊಂದೆಡೆ ರಣವೀರ್ ಸಿಂಗ್ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಹಂತದಲ್ಲಿದ್ದಾರೆ. 2025ರಲ್ಲಿ ಬಿಡುಗಡೆಯಾದ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ಧುರಂಧರ್’, ಬಾಲಿವುಡ್‌ನ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಮಾನ ಗಳಿಸಿದೆ ಎನ್ನಲಾಗುತ್ತಿದೆ.

ಈ ಚಿತ್ರದಲ್ಲಿ ರಣವೀರ್ ಸಿಂಗ್ ‘ಹಮ್ಹಾ ಅಲಿ ಮಜಾರಿ’ ಎಂಬ ಗೂಢಚಾರಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ಆರ್. ಮಾಧವನ್, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರಣವೀರ್ ನಟನೆಗೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Previous articleಉತ್ತರ ಕರ್ನಾಟಕ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್’ ಮೊದಲ ಹಂತ ಪೂರ್ಣ
Next articleಭಾರತೀಯ ರೈಲ್ವೆಯ ಹೊಸ ಡಿಜಿಟಲ್ ಇನೋವೇಶನ್: RailOne ಆಪ್