ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಸರೋಜಾದೇವಿ ನಡೆದುಬಂದ ದಾರಿ

0
151

ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ನಟಿ ಎಂದೆನಿಸಿಕೊಂಡ ಬಿ. ಸರೋಜಾದೇವಿ ಇಂದು ವಯೋಸಹಜ ಅನಾರೋಗ್ಯದಿಂದಾಗಿ ವಿಧಿವಶರಾದರು.

ಕನ್ನಡದಲ್ಲಿ “ಅಭಿನಯ ಸರಸ್ವತಿ”, ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಿಸಿಕೊಂಡಿದ್ದ ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು.

17ನೇ ವಯಸ್ಸಿನಲ್ಲಿ ಸರೋಜಾದೇವಿ ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೆನಿಸಿಕೊಂಡರು. 1955ರಲ್ಲಿ ಕನ್ನಡ ಚಲನಚಿತ್ರ ʼಮಹಾಕವಿ ಕಾಳಿದಾಸʼ ಚಿತ್ರದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದ ಅವರು, ಈ ಮೂಲಕ ದೊಡ್ಡ ಬ್ರೇಕ್ ಪಡೆದರು. 1957ರಲ್ಲಿ ʼಪಾಂಡುರಂಗ ಮಹಾತ್ಯಂʼ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

1970ರ ಅಂತ್ಯದವರೆಗೆ ಸಾಕಷ್ಟು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅವರು, 1958 ತಮಿಳಿನ ನಾಡೋಡಿ ಮನ್ನನ್ ಚಲನಚಿತ್ರ ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1974 ರವರೆಗೆ ತಮಿಳು ಚಲನಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಎರಡನೇ ಸ್ಥಾನದಲ್ಲಿ ಮುಂದುವರೆದರು.

1967ರಲ್ಲಿ ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು, 1958 ರಿಂದ 1980 ರವರೆಗೂ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಅಗ್ರ ನಟಿ ಸ್ಥಾನದಲ್ಲಿ ಭದ್ರವಾಗಿದ್ದರು. ಅಲ್ಲದೇ 1959-1960ರಲ್ಲಿ ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿದರು.

1955 ರಿಂದ 1984ರ ಮಧ್ಯೆ 29 ವರ್ಷಗಳಲ್ಲಿ ಬರೋಬ್ಬರಿ 161 ಚಲನಚಿತ್ರಗಳಲ್ಲಿ ನಟಿಸಿದ ಬಿ. ಸರೋಜಾದೇವಿ ಅವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದವು. 1969 ರಲ್ಲಿ ಭಾರತ ಸರಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ, 1992 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ಪಡೆದರು. ಅಲ್ಲದೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದರು.

ಸರೋಜಾದೇವಿ ಬಾಲ್ಯದ ಜೀವನ
ಸರೋಜಾದೇವಿಯವರು ಮೈಸೂರು ಸಾಮ್ರಾಜ್ಯ (ಈಗಿನ ಬೆಂಗಳೂರು)ದಲ್ಲಿ 1938, ಜನವರಿ 7ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಈ ದಂಪತಿಯ ನಾಲ್ಕನೇ ಮಗಳಾಗಿ ಜನಿಸಿದರು. ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಸರೋಜಾದೇವಿಯವರನ್ನು ಭೈರಪ್ಪನವರು ನೃತ್ಯ ಕಲಿಯಲು ಹೇಳಿದರು ಮತ್ತು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.

ಸ್ಟುಡಿಯೋಗಳಿಗೆ ತೆರಳುತ್ತಿದ್ದ ಯುವತಿ ಸರೋಜಾದೇವಿ ಅವರೊಂದಿಗೆ ಅವರ ತಂದೆಯೂ ಜತೆಯಾಗುತ್ತಿದ್ದರು. ಈಜುಡುಗೆಗಳು ಮತ್ತು ತೋಳಿಲ್ಲದ ಬ್ಲೌಸ್‌ಗಳನ್ನು ತೊಡುವಂತಿಲ್ಲ ಎಂಬ ಕಾಳಜಿಯೊಂದಿಗೆ ತಾಯಿ ಕಟ್ಟುನಿಟ್ಟಾದ ಡ್ರೆಸ್‌ಕೋಡ್‌ ನೀಡಿದರು. ಇದನ್ನು ಮುಂದೆ ಸರೋಜಾದೇವಿ ವೃತ್ತಿಜೀವನದ ಉಳಿದ ಅವಧಿಗೆ ಅನುಸರಿಸಿದರು. 13ನೇ ವಯಸ್ಸಿನಲ್ಲಿ ಸಮಾರಂಭವೊಂದರಲ್ಲಿ ಹಾಡುತ್ತಿದ್ದಾಗ, ಸರೋಜಾದೇವಿಯವರನ್ನು ಕಂಡು ಬಿ.ಆರ್. ಕೃಷ್ಣಮೂರ್ತಿ‍ಯವರು ಚಿತ್ರದ ಪ್ರಸ್ತಾಪ ಮಾಡಿದ್ದರು. ಆದರೆ, ಅವರು ಅದನ್ನು ನಿರಾಕರಿಸಿದ್ದರು.

ಖ್ಯಾತ ನಟರೊಂದಿಗೆ ಸರೋಜಾದೇವಿ
ಕನ್ನಡದಲ್ಲಿ ಡಾ. ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರ ಜೊತೆ ನಟಿಸಿದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ 22 ಯಶಸ್ವಿ ಚಿತ್ರಗಳಲ್ಲಿ, ಎಂ.ಜಿ. ರಾಮಚಂದ್ರನ್ ಜೊತೆ 26 ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನೀಲ್‌ದತ್ ಜೊತೆ ನಟಿಸಿದ ಸರೋಜಾದೇವಿ, ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿ.

ಅಭಿನಯಿಸಿದ ಚಿತ್ರಗಳು
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ,
ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುಚೆನ್ನಮ್ಮ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು
2008ರ ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ.
1992ರಲ್ಲಿ ಕೇಂದ್ರ ಸರಕಾರದ ‘ಪದ್ಮಭೂಷಣ ಪ್ರಶಸ್ತಿ’
1969ರಲ್ಲಿ ಕೇಂದ್ರ ಸರಕಾರದ ಪದ್ಮಶ್ರೀ ಪಡೆದಿದ್ದಾರೆ.

ರಾಜ್ಯ ಪ್ರಶಸ್ತಿಗಳು:
2009 – ಕಲೈಮಾಮಣಿ ಚಿತ್ರಕ್ಕೆ ತಮಿಳುನಾಡು ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ
2009 – ಕರ್ನಾಟಕ ಸರ್ಕಾರದಿಂದ ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
2009 – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
2001 – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
1993 – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
1988 – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
1980 – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
1969 – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
1965 – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ

ಇತರ ಪ್ರಶಸ್ತಿಗಳು:
2009 – ನಾಟ್ಯ ಕಲಾಧರ್ ಪ್ರಶಸ್ತಿ— ತಮಿಳು ಸಿನಿಮಾ, ಭರತ್ ಕಲಾಚಾರ್ ಚೆನ್ನೈ
2007 – ಕರ್ನಾಟಕ ತೆಲುಗು ಅಕಾಡೆಮಿಯಿಂದ ಗಮನಾರ್ಹ ಸಾಧನೆಗಾಗಿ NTR ಪ್ರಶಸ್ತಿ
2007 – ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಆಫ್ ಚೆನ್ನೈನಿಂದ ರೋಟರಿ ಶಿವಾಜಿ ಪ್ರಶಸ್ತಿ
2006 – ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
2006 – ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ವಿಜಯ್ ಪ್ರಶಸ್ತಿ
2003 – ಸರ್ವಾಂಗೀಣ ಸಾಧನೆಗಾಗಿ ದಿನಕರನ್ ಪ್ರಶಸ್ತಿ
1997 – ಚೆನ್ನೈನಲ್ಲಿ ಸಿನಿಮಾ ಎಕ್ಸ್‌ಪ್ರೆಸ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಗಳು
1994 – ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ

ಇನ್ನು 2010ರಲ್ಲಿ, ಭಾರತೀಯ ವಿದ್ಯಾ ಭವನ ‘ಪದ್ಮಭೂಷಣ ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ’, ಪ್ರತಿ ವರ್ಷ ಪ್ರದರ್ಶನ ಕಲೆಯ ಕಲಾವಿದರನ್ನು ಗೌರವಿಸುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಥಾಪಿಸಿತು. ಕೆ.ಜೆ. ಯೇಸುದಾಸ್, ವೈ ಜಯಂತಿಮಾಲಾ, ಅಂಜಲಿದೇವಿ, ಅಂಬರೀಶ್, ಜಯಂತಿ ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Previous articleಪ್ರವಾಸಿಗರೇ ಗಮನಿಸಿ: ಬನ್ನೇರುಘಟ್ಟ ಉದ್ಯಾನವನ ಪ್ರವೇಶ ಶುಲ್ಕ ಏರಿಕೆ
Next articleBengaluru Traffic: ಬೆಂಗಳೂರಿನ ಪ್ರಮುಖ ರಸ್ತೆಯ ವಾಹನ ಸಂಚಾರ ಮಾರ್ಗ ಬದಲು