Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಸ್ ತಡೆದು ನಿಲ್ಲಿಸಿದ ಗಜರಾಜ…!

ಬಸ್ ತಡೆದು ನಿಲ್ಲಿಸಿದ ಗಜರಾಜ…!

0
9

ಕಾರವಾರ: ದಾಂಡೇಲಿ ತಾಲೂಕಿನ ಅಂಬಿಕಾನಗರ ಬೊಮ್ಮನಹಳ್ಳಿ ಮಾರ್ಗದಲ್ಲಿ ಕಾಡಾನೆಯೊಂದು ರಸ್ತೆ ಮಧ್ಯೆ ನಿಂತು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿರುವ ಅಪರೂಪದ ಹಾಗೂ ಕುತೂಹಲಕಾರಿ ಘಟನೆ ವರದಿಯಾಗಿದೆ. ಈ ವಿಶಿಷ್ಟ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅರಣ್ಯ ಪ್ರದೇಶದ ನಡುವೆ ಹಾದುಹೋಗುವ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು, ವಿಶೇಷವಾಗಿ ಬಸ್ಸುಗಳನ್ನು ಆಗಾಗ ಕಾಡಾನೆಯು ರಸ್ತೆ ಮಧ್ಯದಲ್ಲೇ ಅಡ್ಡಗಟ್ಟಿ ನಿಲ್ಲಿಸುತ್ತಿದೆ. ಇತ್ತೀಚೆಗೆ ಎರಡು ಬಸ್ಸುಗಳನ್ನು ಸುಮಾರು 10 ನಿಮಿಷಗಳ ಕಾಲ ರಸ್ತೆಯಲ್ಲೇ ತಡೆದು ನಿಲ್ಲಿಸಿದ ಆನೆಯು, ಸ್ವಲ್ಪ ಸಮಯದ ನಂತರ ಯಾರಿಗೂ ತೊಂದರೆ ನೀಡದೆ ಸ್ವಯಂಪ್ರೇರಿತವಾಗಿ ಅರಣ್ಯದತ್ತ ಹೆಜ್ಜೆ ಹಾಕಿದೆ. ಆನೆಯು ವಾಹನಗಳ ಹತ್ತಿರ ಬಂದು ಏನನ್ನೋ ಗಮನಿಸುತ್ತಿರುವ ರೀತಿ ಕಂಡುಬಂದಿದ್ದು, ಇದು ಪ್ರಯಾಣಿಕರಲ್ಲಿ ಆಶ್ಚರ್ಯ ಹಾಗೂ ಆತಂಕ ಮೂಡಿಸಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಸ್ತೆ ಮಧ್ಯೆ ಆನೆ ಗಾಂಭೀರ್ಯದಿಂದ ನಿಂತು ವಾಹನಗಳನ್ನು ಗಮನಿಸುತ್ತಿರುವುದನ್ನು ಕಂಡು ನೆಟ್ಟಿಗರು ಇದಕ್ಕೆ ಆನೆ ಚೆಕ್‌ಪೋಸ್ಟ್ ಎಂದು ನಾಮಕರಣ ಮಾಡಿದ್ದಾರೆ. ಆನೆಯ ಈ ಶಿಸ್ತಿನ ತಪಾಸಣೆಗೆ ಅನೇಕರು ಹಾಸ್ಯಭರಿತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ: ಮಕ್ಕಳ ರಕ್ಷಣೆ: ಅಸಭ್ಯ ವಿಷಯ ಪ್ರಸಾರ ಮಾಡಿದ 5 OTTಗಳು ಬ್ಯಾನ್

ಸ್ಥಳೀಯರ ಮಾಹಿತಿಯ ಪ್ರಕಾರ, ಈ ಕಾಡಾನೆಯು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇದೇ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಚಾಲಕರು ಹಾಗೂ ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತಾಗಿದೆ.

ಅರಣ್ಯದ ಹಾದಿಯಲ್ಲಿ ಕಾಡುಪ್ರಾಣಿಗಳ ಸಂಚಾರ ಸಹಜ. ವಾಹನ ಸವಾರರು ಆನೆಯನ್ನು ಕಂಡಾಗ ಅತಿ ಸಮೀಪ ಹೋಗಬಾರದು, ಹಾರ್ನ್ ಮಾಡಬಾರದು ಅಥವಾ ಪ್ರಾಣಿಯನ್ನು ಕೆಣಕಬಾರದು. ಸಂಯಮದಿಂದ ವರ್ತಿಸಿ ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Previous articleಕಾಂಗ್ರೆಸ್‌ ದಲಿತ ಸಿಎಂ ಮಾಡೋದು ಅಸಾಧ್ಯ
Next articleಶಿರಸಿ ಮಾರಿಕಾಂಬೆಯ ವೈಭವಯುತ ರಥೋತ್ಸವ