ರಾಯಚೂರು: ರೋಗಿಗಳಿಗೆ ನೀಡಬೇಕಾದ ಆಸ್ಪತ್ರೆಯಲ್ಲಿನ ಕಫ್ ಸಿರಪ್, ಚಚುಮದ್ದು (ಸಿರಂಜ್) ಹಾಗೂ ಚರ್ಮದ ಮಲಾಮು ಸೇರಿದಂತೆ ಇತರೆ ಔಷಧಿಗಳು ತಿಪ್ಪೆಯಲ್ಲಿ ಪತ್ತೆಯಾಗಿರುವ ಘಟನೆ ಎಲ್ಬಿಎಸ್ ನಗರದಿಂದ ಜಲಾಲ್ನಗರಕ್ಕೆ ಸಂರ್ಪಕದಲ್ಲಿರುವ ಸ್ಮಶಾನದ ಬಳಿ ಭಾನುವಾರ ಕಂಡುಬಂದಿದೆ.
ರಾಶಿ ರಾಶಿ ಸಿರೆಂಜ್, ಚಿಕ್ಕ ಮಕ್ಕಳ ಕೆಮ್ಮಿನ ಸಿರಪ್ ಕಂಡು ಸ್ಥಳೀಯ ಯುವಕರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಡಿಎಚ್ಒ ಅವರಿಗೆ ಜಿಲ್ಲಾಧಿಕಾರಿ ಹಾಗೂ ಸಿಇಒ ಅವರು ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಸಂಭ್ರಮದ ಮನೆಯಲ್ಲಿ ಸೂತಕ: ಮದುವೆಗೆ ಮೊದಲೆ ಸೋದರಿಯರ ಆತ್ಮಹತ್ಯೆ
ಇಲ್ಲಿನ ರಿಮ್ಸ್ ಆಸ್ಪತ್ರೆ, ನಮ್ಮ ಕ್ಲಿನಿಕ್ ಸೇರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಔಷಧಿ ಒಂದು ಕೊಟ್ಟರೆ ಮತ್ತೊಂದು ಹೊರಗೆ ತೆಗೆದುಕೊಳ್ಳಲು ಆಸ್ಪತ್ರೆಯ ವೈದ್ಯರು ಚೀಟಿ ಬರೆದು ಕೊಡುತ್ತಾರೆ ಆದರೆ, ಸ್ಮಶಾನದ ಬಳಿ ತಿಪ್ಪೆಯಲ್ಲಿ ಔಷಧಿ ಬಿಸಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಮಾಹಿತಿ ಪಡೆದು ಸ್ಥಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು ಅವರು ಔಷಧ ನಿಯಂತ್ರಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿ ಚೀಲಗಳಲ್ಲಿ ಸಿರೆಂಜ್ ಹಾಗೂ ಕಪ್ ಸಿರೆಪ್, ಔಷಧಿಗಳನ್ನು ಸಂಗ್ರಹಿಸಿಕೊಂಡು ತೆಗೆದುಕೊಂಡು ಹೋದರು.






















