ವಿಜಯಪುರ: ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದ್ದು ವಿಜಯಪುರ ಜಿಲ್ಲೆಯಲ್ಲೂ ಘಟಕ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಬೆಂಗಳೂರಿನ ಖನಿಜ ಭವನದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್ ಮತ್ತು ನಿರ್ದೇಶಕ ವರುಣ್ ಪೊದ್ದಾರ್ ಭೇಟಿ ಬಳಿಕ ಮಾತನಾಡಿ, ಪೊದ್ದಾರ್ ಪ್ಲಂಬಿಂಗ್ಕಂಪನಿಗೆ ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ 33 ಎಕರೆ ಜಮೀನು ನೀಡಿದ್ದು, 2026ರ ಆಗಸ್ಟ್ ಹೊತ್ತಿಗೆ ಇಲ್ಲಿ ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ಘಟಕ ಆರಂಭಿಸಲಿದೆ ಎಂಬ ಮಾಹಿತಿ ನೀಡಿದ್ದು ರಾಜ್ಯದಲ್ಲಿ ಕೈಗಾರಿಕ ಅಭಿವೃದ್ದಿ ಪ್ರಗತಿಯಲ್ಲಿದ್ದು ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಿವಿಸಿ ಮತ್ತು ಪಿವಿಸಿ ಪೈಪುಗಳು ನಿರ್ಮಾಣ ಕಾಮಗಾರಿ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಕಂಪನಿಗೆ ವೇಮಗಲ್ನಲ್ಲಿ ಈಗಾಗಲೇ 28 ಎಕರೆ ಜಮೀನು ಕೊಡಲಾಗಿದೆ.
ಉಳಿದ 5 ಎಕರೆಯನ್ನು ಇನ್ನು ಕೆಲವೇ ದಿನಗಳಲ್ಲಿ ಹಸ್ತಾಂತರಿಸಲಾಗುವುದು. ಈ ಕಂಪನಿಯು ಈಗಾಗಲೇ ಆಶೀರ್ವಾದ್ ಬ್ರ್ಯಾಂಡ್ ಹೆಸರಿನ ಪೈಪ್ ಕಂಪನಿಗೆ ಪ್ರವರ್ತಕ ಸ್ಥಾನದಲ್ಲಿತ್ತು. ಕಂಪನಿಯು ಈ ಹಿಂದೆ 492 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758 ಕೋಟಿ ರೂ.ಗೆ ಏರಿಸಲು ಅನುಮೋದನೆ ಕೋರಿದೆ. ಈ ಯೋಜನೆಯಿಂದ 3 ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಒಟ್ಟಾರೆ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದಿದ್ದಾರೆ.
ವೇಮಗಲ್ ಘಟಕದ ಕಾರ್ಯಾರಂಭದ ನಂತರ ವಿಜಯಪುರ ಜಿಲ್ಲೆಯಲ್ಲೂ ಹೂಡಿಕೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದ್ದು, ರಾಜ್ಯದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂ.ಗಳಿಗೆ ಕೊಂಡೊಯ್ಯುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದರಿಂದಾಗಿ ಸರಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಬರಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ದೀರ್ಘಕಾಲಿನ ಮತ್ತು ಸರ್ವರನ್ನೂ ಒಳಗೊಂಡ ಬೆಳವಣಿಗೆಯಲ್ಲಿ ಕರ್ನಾಟಕವು ನಂಬಿಕೆ ಇರಿಸಿದ್ದು, ಹೂಡಿಕೆದಾರರನ್ನು ನಿರಂತರವಾಗಿ ಆಕರ್ಷಿಸುತ್ತಲೇ ಇದೆ ಎಂದರು.