ಕಲಬುರಗಿ ರೊಟ್ಟಿ ಬಗ್ಗೆ ಗೊತ್ತಿರುವ ಹಾಗೆ ₹400 ಕೋಟಿ ಹಣ ಎಲ್ಲಿಂದ ಬಂತು ಗೊತ್ತಿರಬೇಕು
ಕಲಬುರಗಿ: ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವ ₹400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಆ ಹಣ ಯಾರದು? ಏನು? ಎಲ್ಲಿಂದ ಬಂದಿದೆ? ಎಂಬುದೇ ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಈ ಪ್ರಕರಣಕ್ಕೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಿಂಕ್ ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ
ಈ ಮೂರು ರಾಜ್ಯಗಳಲ್ಲೂ ಅದೇ ಪಕ್ಷದ ಸರ್ಕಾರಗಳಿವೆ. ಹಾಗಾದರೆ ಇವೆಲ್ಲವೂ ಆ ಸರ್ಕಾರಗಳ ಮೂಗಿನ ನೆರಳಲ್ಲೇ ಹೇಗೆ ನಡೆಯುತ್ತಿದೆ? ಹಣ ಯಾರದು ಎಂಬುದರ ಬಗ್ಗೆ ತನಿಖೆ ನಡೆಯಲಿ” ಎಂದು ಹೇಳಿದರು.
ಯಾರದ್ದೇ ಹಣ ಇರಲಿ – ತನಿಖೆ ಆಗಬೇಕು : “ಆ ₹400 ಕೋಟಿ ದರೋಡೆ ಹಣ ಕಾಂಗ್ರೆಸ್ನದ್ದಾಗಿರಲಿ ಅಥವಾ ಬಿಜೆಪಿಯದ್ದಾಗಿರಲಿ, ಮೊದಲು ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಡಿಮೋನಿಟೈಸೇಶನ್ ಕುರಿತು ವ್ಯಂಗ್ಯ: “ಡಿಮೋನಿಟೈಸೇಶನ್ ಅಂತ ದೊಡ್ಡ ಸ್ಲೋಗನ್ ಕೊಟ್ಟು, ಎಲ್ಲ ಕಪ್ಪು ಹಣ ವಾಪಸ್ ಬಂತು ಎಂದು ಪ್ರಧಾನಮಂತ್ರಿಯವರೇ ದೇಶದೆಲ್ಲೆಡೆ ಹೇಳಿಕೊಂಡು ಓಡಾಡಿದ್ದರು. ಹಾಗಿದ್ದರೆ ಈಗ ಈ ₹400 ಕೋಟಿ ಎಲ್ಲಿಂದ ಬಂತು?” ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಸರ್ಕಾರದ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ
ಬಿಜೆಪಿ ಮುಖಂಡರ ಹೇಳಿಕೆಗಳ ಮೇಲೆ ಅನುಮಾನ: ಕರ್ನಾಟಕದ ಕೆಲ ಬಿಜೆಪಿ ಮುಖಂಡರು ಈ ಹಣವನ್ನು ತಿರುಪತಿಗೆ ಕಪ್ಪು ಹಣವನ್ನು ಬಿಳಿ ಹಣ ಮಾಡಲು ಅಥವಾ ಚುನಾವಣೆಗೆ ಬಳಸಲು ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು, “ಹಾಗಾದರೆ ಅವರಿಗೆ ಈ ಮಾಹಿತಿ ಹೇಗೆ ಗೊತ್ತು? ಸರ್ಕಾರಗಳಿಗೆ ಇಲ್ಲದ ಮಾಹಿತಿ ಬಿಜೆಪಿ ಶಾಸಕರಿಗೆ ಹೇಗೆ ತಿಳಿಯುತ್ತದೆ?” ಎಂದು ಪ್ರಶ್ನಿಸಿದರು.
‘ಮನ್ ಕಿ ಬಾತ್’ ಮತ್ತು ಗೃಹ ಸಚಿವರ ಮೇಲೆ ಟೀಕೆ: “ಪ್ರಧಾನಮಂತ್ರಿ ಅವರು ‘ಮನ್ ಕಿ ಬಾತ್’ನಲ್ಲಿ ಭಜನ್ ಕ್ಲಬ್ ಬಗ್ಗೆ ಮಾತನಾಡುತ್ತಾರೆ. ಆದರೆ ₹400 ಕೋಟಿ ಹಣ ಟ್ರಕ್ಗಳಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲವೇ?” ಎಂದು ವ್ಯಂಗ್ಯವಾಡಿದರು. “ಅಮಿತ್ ಶಾ ಅವರು ಎಲ್ಲಿದ್ದಾರೆ? ನಿದ್ದೆ ಮಾಡುತ್ತಿದ್ದಾರಾ? ಚುನಾವಣೆ ಬಂದಾಗ ಮಾತ್ರ ಇವರೆಲ್ಲ ಕಾಣಿಸಿಕೊಳ್ಳುತ್ತಾರೆ. ಇಂತಹ ಪ್ರಶ್ನೆಗಳು ಬಂದಾಗ ಕೇವಲ ಕಾಂಗ್ರೆಸ್ ಮಾತ್ರ ಉತ್ತರಿಸಬೇಕೇ? ಬಿಜೆಪಿ ಕೂಡ ಉತ್ತರ ಕೊಡಬೇಕು” ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ
ಕಲಬುರಗಿ ರೊಟ್ಟಿ ಉದಾಹರಣೆ: “ಪ್ರಧಾನಮಂತ್ರಿಗೆ ಕಲಬುರಗಿ ರೊಟ್ಟಿ ಬಗ್ಗೆ ಗೊತ್ತಿರುತ್ತದೆ. ಹಾಗಾದರೆ ಈ ₹400 ಕೋಟಿ ಹಣ ಎಲ್ಲಿಂದ ಹೋಗುತ್ತಿದೆ ಎಂಬುದೂ ಗೊತ್ತಿರಬೇಕು” ಎಂದು ಅವರು ಟೀಕಿಸಿದರು.
ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತ ಪ್ರತಿಕ್ರಿಯೆ: 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧಿಸಿ ಅಧಿಕಾರಕ್ಕೆ ಬರುವುದು, ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಎರಡೂ ಪಕ್ಷಗಳಿಗೆ ತಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಒಂದಾಗಬೇಕಾದ ಸ್ಥಿತಿ ಬಂದಿದೆ. ಬಿಜೆಪಿಯವರು ಮೊದಲು ಕುಮಾರಸ್ವಾಮಿ ಅವರನ್ನು ತಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ನೋಡೋಣ. ಇವೆಲ್ಲವೂ ಈಗ ಊಹಾಪೋಹಗಳಷ್ಟೇ” ಎಂದರು.























