ಕಲಬುರಗಿ: ನಗರದ ಕುವೆಂಪು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳನು ದೇವರ ವಿಗ್ರಹದ ಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
ಘಟನೆ ವಿವರ: ಮಾಹಿತಿಯ ಪ್ರಕಾರ, ಕಬ್ಬಿಣದ ರಾಡಿನ ಸಹಾಯದಿಂದ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಖದೀಮನು, ದೇವಿಯ ಕೊರಳಲ್ಲಿದ್ದ ಸುಮಾರು 9 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 100 ಗ್ರಾಂ ತೂಕದ ಬೆಳ್ಳಿ ಮುಖವಾಡವನ್ನು ಕಳವು ಮಾಡಿದ್ದಾನೆ. ಬೆಳಿಗ್ಗೆ ಪೂಜೆಗಾಗಿ ಬಂದ ಅರ್ಚಕರು ಘಟನೆ ಗಮನಕ್ಕೆ ತಂದಿದ್ದಾರೆ.
ಘಟನೆಯ ದೃಶ್ಯಗಳು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಇದನ್ನು ಆಧಾರವಾಗಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
ಸ್ಥಳೀಯ ಭಕ್ತರು ದೇವಸ್ಥಾನದಲ್ಲಿ ನಡೆದ ಈ ಕಳ್ಳತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧಿಯನ್ನು ಶೀಘ್ರ ಬಂಧಿಸುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.























