ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹಗುರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರ ಧೋರಣೆ ಖಂಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಬಿಜೆಪಿಯ ಟೀಕೆಗಳು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಖರ್ಗೆ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ ಎಂದರು.
ಖರ್ಗೆ ಅವರು ಅಸ್ಸಾಂನಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿಷ ಸರ್ಪ ಎಂದು ಹೇಳಿದ್ದು ದೊಡ್ಡ ಸುದ್ದಿ ಮಾಡಿದ್ದಾರೆ. ಹಿಂದೆ ಕಾಂಗ್ರೆಸ್ಗೆ ಅರ್ಬನ್ ನಕ್ಸಲ್ ಹಾಗೂ ಸೋನಿಯಾ ಗಾಂಧಿ, ನೆಹರು ಹಾಗೂ ಅನೇಕರ ಬಗ್ಗೆ ಮಾತನಾಡಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ದೊಡ್ಡದು ಮಾಡಿದ್ದು ಸರಿಯಲ್ಲ. ಮೊದಲು ನಿಮ್ಮದನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಖರ್ಗೆ ಅವರು ಕಾಂಗ್ರೆಸ್ ಸಿದ್ಧಾಂತ ಮೇಲೆ ರಾಜಕಾರಣ ಮಾಡಿದ್ದಾರೆ. ಸಮಾಜ ಒಡೆಯುವ, ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಬಿಜೆಪಿಯವರು ಖರ್ಗೆ ಅವರ ಮಾತಿಗೆ ಕಲರ್ ಕೊಡುತ್ತಿದ್ದಾರೆ. ದೂರು ದಾಖಲು ಮಾಡಿದ್ದು ಸಹ ಖಂಡನೀಯ ಎಂದರು.






















