ಕಲಬುರಗಿ: ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಕೆಯಿಂದ ಯಾವುದೇ ಮೋಸ ಆಗಲ್ಲ, ಆದರೆ ಜಗತ್ತಿನ ಮುಂದುವರೆದ ಯಾವುದೇ ರಾಷ್ಟ್ರಗಳು ಇವಿಎಂ ಬಳಕೆಗೆ ಹಿಂದೇಟು ಹಾಕುತ್ತಿರುವಾಗ ನಾವ್ಯಾಕೆ ಬಳಸಬೇಕು ಎಂದು ಸಾರಿಗೆ, ಮುಜರಾಯಿ ಖಾತೆ ಸಚಿವ ರಾಮಲಿಂಗಾರಡ್ಡಿ ಪ್ರಶ್ನಿಸಿದರು.
ಬಿಜೆಪಿ ಶಾಸಕ ಸುರೇಶಕುಮಾರ ಕಾಂಗ್ರೆಸ್ನವರು ವಾಪಸ್ ಶಿಲಾಯುಗಕ್ಕೆ ಹೋಗುತ್ತಿದ್ದಾರೆ ಎಂಬ ಹೇಳಿಕೆಗೆ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ಶಿಲಾಯುಗ ಅಲ್ಲ, ಮೋಸದ ಯುಗದಿಂದ ಯಾವ ಯುಗಕ್ಕೆ ಬಂದರೂ ತೊಂದರೆ ಇಲ್ಲ. ಸದ್ಯ ಅವರರಿವುದು ಮೋಸದ ಯುಗದಲ್ಲಿ. ಆದರೆ ಎಲ್ಲಾ ಎಲೆಕ್ಷನ್ನಲ್ಲಿ ಮೋಸ ಮಾಡುವವರು ಇರುವುದಿಲ್ಲ. ಸಮಯ ಸಂದರ್ಭ ಗಮನಿಸಿ ತಮಗೆ ಬೇಕಾದ ರೀತಿಯಲ್ಲಿ ಮಾತ್ರ ಮೋಸಕ್ಕಿಳಿಯುತ್ತಾರೆ ಎಂದು ಲೇವಡಿ ಮಾಡಿದರು.
ಈ ನಿಟ್ಟಿನಲ್ಲಿ ಬ್ಯಾಲೇಟ್ ಪೇಪರ್ ವೋಟಿಂಗ್ ಸಾಧ್ಯವಾಗುವ ಕೆಲಸ, ಆದರೆ ಇವಿಎಂ ಬಗ್ಗೆ ಎಲ್ಲಿಯೋ ಕುಳಿತು ಮೇಲ್ವಿಚಾರಣೆ ಮಾಡುವುದೆಂದರೆ ಕೊಂಚ ಅನುಮಾನಕ್ಕೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ ಸೋತಾಗ ಮಾತ್ರ ಇವಿಎಂ ವಿಚಾರ ಮುನ್ನೆಲೆಗೆ ಬರುತ್ತದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವವರು, ಜರ್ಮನ ದೇಶದವರು ಮೊದಲ ಬಾರಿಗೆ ಮೊದಲು ಇವಿಎಂ ತಯಾರಿಸಿದವರು. ಆದರೆ ಅಲ್ಲಿನ ಸುರ್ಪಿಂಕೋರ್ಟ್ ಇವಿಎಂ ಬೇಡವೆಂದು ತೀರ್ಮಾನಿಸಿದೆ. ಅಲ್ಲದೆ ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿಯೂ ಇವಿಎಂ ಬಳಕೆಯಿಲ್ಲ. ಆದರೆ ಭಾರತದಲ್ಲಿ ಮಾತ್ರ ಏಕೆ? ಎಂದು ಮರುಪ್ರಶ್ನಿಸಿದರು.
ಈ ಹಿಂದೆ ಪ್ರಧಾನಿ ದಿ. ರಾಜೀವಗಾಂಧಿ ಸರಕಾರ ಇದ್ದಾಗ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರಕಾರ ಇವಿಎಂ ಬಳಕೆ ಬಗ್ಗೆ ತೀರ್ಮಾನಿಸಿರುವುದು ನಿಜ. ಆದರೆ ಇತ್ತೀಚೆಗೆ ಇವಿಎಂನಲ್ಲಿ ಭಾರಿ ಮೋಸ ಕಂಡುಬರುತ್ತಿದೆ ಎನ್ನುವ ಸಂಶಯ ಕಾಡುತ್ತಿದೆ. ಇದರಿಂದ ನಾವು ತಂತ್ರಜ್ಞಾನದಿಂದ ಹಿಂದೆ ಬರುತ್ತಿದ್ದೇವೆ ಎಂಬ ಭಾವನೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಣ್ಣ ಕಾಂಗ್ರೆಸ್ ನಲ್ಲಿಯೇ ಉಳಿಯುತ್ತಾರೆ: ರಾಜಕೀಯದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಾಜಿ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆ ಆಗುವುದು ಊಹಾಪೋಹ, ಇತ್ತೀಚೆಗೆ ಅವರ ಜನ್ಮದಿನಕ್ಕೆ ಶುಭಾಶಯ ಕೊರಲು ಹೋಗಿದ್ದೆ. ರಾಜಣ್ಣ ಯಾವುದೇ ಪಕ್ಷಕ್ಕೆ ಹೋಗಲ್ಲ, ಹಿಂದೆಯೂ ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ. ಈಗಲೂ ಕಾಂಗ್ರೆಸ್ನವರಾಗಿದ್ದಾರೆ ಎಂದರು
ಗ್ರಹಣ – ದೇವಸ್ಥಾನಗಳಿಗೆ ಮಾರ್ಗಸೂಚಿ ಇಲ್ಲ: ಭಾನುವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಕೆಲವರು ಮುಚ್ಚುತ್ತಾರೆ. ಕೆಲವರೂ ಇಲ್ಲ. ಆದರೆ ಅವರವರ ಸಂಪ್ರದಾಯದಂತೆ ಪಾಲಿಸುತ್ತಾರೆ ಹೊರತು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಮಾರ್ಗಸೂಚಿಗಳಿಲ್ಲ. ಹೀಗಾಗಿ, ಮುಚ್ಚಲೆಬೇಕು, ತೆಗಿಯಲೇಬೇಕು ಎಂಬ ಆದೇಶಗಳಿಲ್ಲ. ದೇವಸ್ಥಾನಗಳನ್ನು ಕೆಲವರು ಮುಚ್ಚುತ್ತಾರೆ, ಕೆಲವರು ಇಲ್ಲ. ಅವರವರ ಸಂಪ್ರದಾಯ ಅನುಸರಿಸುತ್ತಾರೆ ಎಂದರು