ಹಾಸನ: ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆಯುತ್ತಿದ್ದ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಲಾರಿಯೊಂದು ಜನಸಮೂಹದ ನಡುವೆ ನುಗ್ಗಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನದಿಂದ ಹೊಳೆನರಸಿಪುರ ಮಾರ್ಗವಾಗಿ ಹೋಗುತ್ತಿದ್ದ ಮಿನಿ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಗಣೇಶ ವಿಸರ್ಜನೆ ನಡೆಯುತ್ತಿದ್ದ ಮೆರವಣಿಗೆಗೆ ನುಗ್ಗಿದೆ. ದುರಂತದಲ್ಲಿ ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆ ಮತ್ತಿತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹಾಸನ-ಹೊಳೆನರಸೀಪುರ ರಸ್ತೆಯ ಮೊಸಳೆಹೊಸಳ್ಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯು ಜನಸಮೂಹದ ನಡುವೆ ನುಗ್ಗಿದೆ.
ಲಾರಿ ಅಪ್ಪಳಿಸಿದ ಪರಿಣಾಮವಾಗಿ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟರು. ಜಿಲ್ಲಾಸ್ಪತ್ರೆ ಮತ್ತು ಹಾಸನದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಗೊರೂರು ಪೊಲೀಸರು ಆಗಮಿಸಿದ್ದಾರೆ. ಶಾಸಕರುಗಳಾದ ಹೊಳೆನರಸೀಪುರ ಹೆಚ್ಡಿ ರೇವಣ್ಣ, ಹಾಸನದ ಸ್ವರೂಪ್ ಪ್ರಕಾಶ್ ಮತ್ತು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸ್ಥಿತಿಗತಿ ವೀಕ್ಷಿಸಿದರು.