ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ' ಕನ್ನಡದ ಮೊಟ್ಟಮೊದಲ ದಿನಪತ್ರಿಕೆ. ಈ ಪತ್ರಿಕೆಯನ್ನು
ಕರುನಾಡಿನ ಸಾಕ್ಷಿಕಲ್ಲು’ ಎಂಬುದಾಗಿಯೇ ರಾಜ್ಯ-ದೇಶಗಳಲ್ಲಿ ಗುರುತಿಸಲಾಗುತ್ತದೆ. ರಾಷ್ಟ್ರೀಯತೆ, ಭಾವೈಕ್ಯತೆ, ಅಭ್ಯುದಯ ತತ್ವಗಳನ್ನು ಅಡಿಪಾಯವಾಗಿ ಹೊಂದಿರುವ, ಕನ್ನಡ ಭಾಷೆ-ನೆಲ-ಜಲಕ್ಕೆ ಬದ್ಧವಾದ ಈ ಪತ್ರಿಕೆ ನಾಡಿನ ಜನತೆಯ ಹೆಮ್ಮೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸಂಯುಕ್ತ ಕರ್ನಾಟಕ ಪತ್ರಿಕೆ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಯುಕ್ತ ಕರ್ನಾಟಕದ ಇತಿಹಾಸವೆಂದರೆ ಅದು ನವ-ಕರ್ನಾಟಕದ ಇತಿಹಾಸ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಪತ್ರಿಕೆಯು ನಂತರ ನಡೆದ ಕರ್ನಾಟಕ ಏಕೀಕರಣ ಚಳವಳಿಯ ನೇತೃತ್ವ ವಹಿಸಿತ್ತು.
ಕನ್ನಡ ಭಾಷಿಕ ಕರುನಾಡಿಗರು ಹರಿದು
ಹಂಚಿಹೋಗದೆ ಒಂದೇ ರಾಜ್ಯದಲ್ಲಿ ಉಳಿಯುವಂತೆ ಮಾಡಿತ್ತು. ಹುಬ್ಬಳ್ಳಿಯ ಕೊಪ್ಪೀಕರ್ ರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಪತ್ರಿಕೆ, ಈಗ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ `ಸ್ಟೆಲ್ಲರ್ ಮಾಲ್’ನ ನೂತನ ಕಚೇರಿಗೆ ಸ್ಥಳಾಂತರವಾಗಿದೆ.
ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿರುವ ಪತ್ರಿಕೆಯು ತನ್ನ ರಾಷ್ಟ್ರೀಯ-ರಾಜ್ಯ ಹಿತದ ಬದ್ಧತೆಗಳನ್ನು ಇನ್ನಷ್ಟು ಪ್ರಖರವಾಗಿ ಪಸರಿಸಲಿದೆ ಎಂದು ಹಾರೈಸಿದರು. ಆಧುನಿಕ, ಆಡಂಬರದ ಜಗತ್ತಿನಲ್ಲೂ ಸಂಯುಕ್ತ ಕರ್ನಾಟಕ ತನ್ನ ಮೂಲತನವನ್ನು ಕಳೆದುಕೊಂಡಿಲ್ಲ.
ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿ ವಿಭಾಗದ ರಾಜಕಾರಣಿಗಳು ಬೆಳೆಯಲು ಮತ್ತು ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿಗಳಿಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಾಥಸ್ಮರಣೀಯ.
ಪತ್ರಿಕೆಯ ಬೆಂಬಲ, ಸಹಕಾರದಿಂದ ನಮ್ಮ ಕೆಲಸಗಳು ಜನರನ್ನು ತಲುಪಿವೆ. ಆಮೂಲಕವೇ ನಮಗೆ ಮುಖ್ಯಮಂತ್ರಿ ಸ್ಥಾನ ಒಲಿದಿತ್ತು ಎಂದು ವಿವರಿಸಿದರು.
ನಮ್ಮನ್ನು ನಾವೇ ವಿಮರ್ಷೆ ಮಾಡಿಕೊಳ್ಳಲು ಹಚ್ಚುತ್ತಿದ್ದ ಪತ್ರಿಕೆಗೆ ಮತ್ತು ರಾಜಕಾರಣಕ್ಕೆ ಅವಿನಾಭಾವ ಸಂಬಂಧವಿದೆ. ಪ್ರಜಾಪ್ರಭುತ್ವಕ್ಕೆ ವ್ಯವಸ್ಥೆಗೆ ಎರಡೂ ಮುಖ್ಯ.
ಈ ನಿಟ್ಟಿನಲ್ಲಿ ಬದ್ಧತೆ ಇರುವ ಪತ್ರಿಕೆಗಳ ಸಂಖ್ಯೆ ಬಹಳ ಕಡಿಮೆ. ಆದರೆ, ಸಂಯುಕ್ತ ಕರ್ನಾಟಕ ಮಾತ್ರ ಪತ್ರಿಕೋದ್ಯಮದ ಪಾವಿತ್ರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದೆ.
ರಾಜ್ಯವನ್ನು ಪುನರ್ ನಿರ್ಮಾಣ ಮಾಡುವ ಶಕ್ತಿ, ಸಂಯುಕ್ತ ಕರ್ನಾಟಕಕ್ಕಿದ್ದು, ಹೊಸ ಚಿಂತನೆ, ಹೊಸ ದಿಕ್ಕಿನೆಡೆಗೆ ಪ್ರಗತಿ ಪೂರ್ವಕವಾಗಿ ಮುನ್ನಡೆಯಲಿ ಎಂದು ಆಶಿಸಿದರು.