ಹುಬ್ಬಳ್ಳಿ: ಬಹುದಿನಗಳ ಬೇಡಿಕೆಯಾದ ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಕೈಗೊಳ್ಳಲು ಮುಹೂರ್ತ ಕೂಡಿ ಬಂದಿದ್ದು, ಯೋಜನೆ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಗ್ರಾಮದಲ್ಲಿ ಫೆ. 8ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ ಪಾಟೀಲ, ಸಂತೋಷ ಲಾಡ್, ಕೃಷ್ಣಭೈರೇಗೌಡ, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಪ್ರಸಾದ ಅಬ್ಬಯ್ಯ, ಸಲೀಂ ಅಹ್ಮದ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ನವಲಗುಂದ ಶಾಸಕ ಎನ್.ಎಚ್ ಕೋನರಡ್ಡಿ ವಹಿಸಲಿದ್ದಾರೆ.
ಬೆಣ್ಣೆ ಹಳ್ಳ ಕುಂದಗೋಳ, ಹುಬ್ಬಳ್ಳಿ, ನವಲಗುಂದ, ನರಗುಂದ ತಾಲೂಕಿನಲ್ಲಿ ಒಟ್ಟು 141 ಕಿ.ಮೀ ಉದ್ದಕ್ಕೂ ಹರಿಯುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹಕ್ಕೆ ಹಳ್ಳದ ವ್ಯಾಪ್ತಿ ಪ್ರದೇಶದ ಗ್ರಾಮಗಳು, ರೈತರ ಜಮೀನಿಗೆ ಸಂಕಷ್ಟ ಎದುರಿಸಿಕೊಂಡು ಬಂದಿದ್ದು, ಜೀವ ಹಾನಿಗಳು ಆಗಿವೆ. ಪ್ರವಾಹ ಬಂದರೆ ಹಳ್ಳದ ಸುತ್ತಮುತ್ತಲಿನ ಗ್ರಾಮಗಳು ನಡುಗಡ್ಡೆಯಂತಾಗುತ್ತಿವೆ.






















