ದಾವಣಗೆರೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ತಮ್ಮನ್ನು ಭೇಟಿ ಮಾಡಲು ಹೋಗಿದ್ದ ಮುಸ್ಲಿಂ ಸಮಾಜದ ಮುಖಂಡರು, ಧಾರ್ಮಿಕ ಗುರುಗಳು ಹಾಗೂ ಕಾಂಗ್ರೆಸ್ ನಾಯಕರನ್ನು ಅವಮಾನಿಸಿ ಕಳಿಸಿದ್ದಾರೆ ಎಂದು ಸಿ.ಎಂ. ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಹಿರಿಯರು ಸೌಜನ್ಯದಿಂದ ಮಾತನಾಡಲು ಹೋದಾಗ, ನೀವು ನಮ್ಮನ್ನು ಬ್ಲ್ಯಾಕ್ಮೇಲ್ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಸಚಿವರು ಉದ್ಧಟತನ ತೋರಿದ್ದಾರೆ. ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರ ಗೆಲುವಿಗೆ ಮುಸ್ಲಿಂ ಸಮಾಜದವರು ಶ್ರಮಿಸಿದ್ದರು. ಆದರೆ ಈಗ ಅಧಿಕಾರದ ಮದದಿಂದ ಸಮಾಜದ ಗುರುಗಳನ್ನೇ ಅವಮಾನಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಸಮಾಜದ ಭಾವನೆಗಳಿಗೆ ಬೆಲೆ ನೀಡದೆ ಏಕಪಕ್ಷೀಯವಾಗಿ ನಿರ್ಧಾರ ಮಾಡಲಾಗಿದೆ. ಪಕ್ಷಕ್ಕೆ ದುಡಿದ ಮುಸ್ಲೀಮರನ್ನು ಕಡೆಗಣಿಸಲಾಗಿದೆ ಎಂದರು.
ದಾವಣಗೆರೆಯಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದ್ದು, ಹಿಂದುಳಿದವರು, ದಲಿತರು, ರೈತ ಸಂಘದವರು ಹಾಗೂ ಪ್ರಗತಿಪರ ಚಿಂತಕರೆಲ್ಲರೂ ಒಗ್ಗೂಡಿ ಮೂರನೇ ಶಕ್ತಿಗೆ ಬುನಾದಿ ಹಾಕಲಿದ್ದಾರೆ. ಯುವ ನಾಯಕ ಆದಿಲ್ ಪಾಷಾ ಅವರಿಗೆ ಎಲ್ಲ ಸಮಾಜದ ಬೆಂಬಲವಿದ್ದು, ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ದಾವಣಗೆರೆಯಿಂದಲೇ ಹೊಸ ಶಕೆಯೊಂದು ಆರಂಭವಾಗಲಿದೆ ಎಂದು ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.






















