ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತಾದಿಗಳ ನಡುವೆ ಸಂಭ್ರಮದಿಂದ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತಾಯ ಅವರು, ದೇವಳದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಅಲಂಕಾರಗೊಂಡ ಪಲ್ಲಕ್ಕಿಯಲ್ಲಿ ಉಮಾಮಹೇಶ್ವರ ದೇವರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವರುಗಳನ್ನು ವೈಭವದ ಮಂಗಳವಾದ್ಯ, ಸ್ಯಾಕ್ಸೋಫೋನ್, ಬ್ಯಾಂಡ್ ವಾದ್ಯಗಳ ಹಾಗೂ ಚಂಡೆಯ ನಾದದೊಂದಿಗೆ ರಥ ಬೀದಿಗೆ ತಂದರು. ಉಮಾಮಹೇಶ್ವರ ದೇವರನ್ನು ಪಂಚಮಿ ರಥದಲ್ಲಿಯೂ, ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥದಲ್ಲಿಯೂ ಆಸೀನಗೊಳಿಸಿದರು.
ಸಹಸ್ರಾರು ಭಕ್ತರ ಜಯಘೋಷದ ನಡುವೆ ಬ್ರಹ್ಮರಥವು ರಾಜ ಗಾಂಭೀರ್ಯದಿಂದ ರಥ ಬೀದಿಯಲ್ಲಿ ಮುನ್ನಡೆಯಿತು. ಇದಕ್ಕೆ ಸಾಕ್ಷಿ ಎಂಬಂತೆ ಕ್ಷೇತ್ರದ ಎಲ್ಲಾ ಕಡೆ ನೆರೆದ ಸಹಸ್ರರು ಭಕ್ತರು ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತರ್ಥರಾದರು.
ರಥ ಎಳೆಯಲು ಪಾಸ್: ರಥ ಎಳೆಯಲು ನೂಕುನುಗ್ಗಲು ಉಂಟಾಗುವುದನ್ನು ನಿಯಂತ್ರಿಸಲು ಬ್ರಹ್ಮರಥ ಸೇವಾರ್ಥಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಹಾಗೆ ಬ್ರಹ್ಮರಥ ಸೇವೆ ಮಾಡಿದವರಿಗೆ ದೇವರ ಪ್ರಸಾದವನ್ನು ಅರ್ಚಕರು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಿಸಿದರು.


























