ಸಮಾಜ ಸೇವೆಯಿಂದ ಹಿಂದೆ ಸರಿದ ಉದ್ಯಮಿ : ದಾನಿಗಳಿಗೆ ಲೆಕ್ಕ ಕೇಳುವ ಹಕ್ಕಿಲ್ಲವೇ? – ಡಾ. ಕನ್ಯಾನ ಪ್ರಶ್ನೆ
ಮಂಗಳೂರು: ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದಿರುವ ಮುಂಬಯಿಯ ಉದ್ಯಮಿ ಹಾಗೂ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜ ಸೇವಾ ಚಟುವಟಿಕೆಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಾಗತಿಕ ಬಂಟರ ಸಂಘ ದ ಲೆಕ್ಕಪತ್ರಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ತಮ್ಮ ವಿರುದ್ಧ ತೇಜೋವಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಭರವಸೆ ಪಾಲನೆ ಮುಂದುವರಿಯಲಿದೆ: ಹಾವೇರಿಯಲ್ಲಿ ಸಿಎಂ ಭರವಸೆ
“ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿ ಬಂದಿದೆ”: ಸಮಾಜ ಸೇವೆ ತಾವು ಹೃದಯಪೂರ್ವಕವಾಗಿ ಕೈಗೊಂಡ ಕಾರ್ಯವಾಗಿತ್ತು ಎಂದು ಹೇಳಿದ ಡಾ. ಕನ್ಯಾನ, ಬಡತನದಿಂದ ಹೊರಬಂದು ಉದ್ಯೋಗ ಹಾಗೂ ಉದ್ಯಮ ಕಟ್ಟಿಕೊಂಡ ತಮ್ಮ ಜೀವನದ ಪಯಣವನ್ನು ಸ್ಮರಿಸಿದರು. “ಆರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೆ. ಇದು ನನಗೆ ಆತ್ಮತೃಪ್ತಿ ನೀಡುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ನನ್ನ ನೆಮ್ಮದಿಯನ್ನು ಕಸಿದುಕೊಂಡಿವೆ” ಎಂದು ಅವರು ನೋವು ವ್ಯಕ್ತಪಡಿಸಿದರು.
ದಾನಿಗಳಿಗೆ ಲೆಕ್ಕ ಕೇಳುವ ಹಕ್ಕಿಲ್ಲವೇ?: ದಾನ ನೀಡಿದವರಿಗೆ ಲೆಕ್ಕ ಕೇಳುವ ಹಕ್ಕು ಇದೆಯೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಫೆಬ್ರವರಿ 16ರಂದು ಮುಂಬಯಿನಲ್ಲಿ ಕರೆಯಲಾದ ಸಭೆ ಎಲ್ಲಾ ದಾನಿಗಳ ಒಪ್ಪಿಗೆಯೊಂದಿಗೆ ನಡೆದ ಸಭೆಯಾಗಿದೆ ಎಂದರು. ಆ ಸಭೆಗೆ ಸಂಬಂಧಿಸಿ ಜಾಹೀರಾತು ನೀಡಿ, ಲಾಯರ್ ನೋಟೀಸ್ ಕಳುಹಿಸಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಬೈನಲ್ಲಿ ಮೆಟ್ರೋ ಕಾಮಗಾರಿ ದುರಂತ: ಸ್ಲ್ಯಾಬ್ ಕಂಬ ಕುಸಿದು ಒಬ್ಬ ಸಾವು, 3 ಜನರಿಗೆ ಗಾಯ
ಮಾನಹಾನಿಕಾರಕ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ: ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಹೇಳಿಕೆಗಳು ಪ್ರಸಾರವಾಗುತ್ತಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂಬಂಧ ಈಗಾಗಲೇ ಕೇರಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ದೇಣಿಗೆ ವಾಗ್ದಾನ ಸ್ಥಗಿತ: ಫೆಬ್ರವರಿ 14ರಿಂದ ಸಂಘ–ಸಂಸ್ಥೆಗಳಿಗೆ ನೀಡುತ್ತಿದ್ದ ದೇಣಿಗೆ ವಾಗ್ದಾನವನ್ನು ಸ್ಥಗಿತಗೊಳಿಸಿರುವುದಾಗಿ ಅವರು ಘೋಷಿಸಿದರು. ಆದರೆ ವೈಯಕ್ತಿಕವಾಗಿ ಆರೋಗ್ಯ ಹಾಗೂ ವೈದ್ಯಕೀಯ ನೆರವಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್
“ಸಮಾಜ ಸೇವೆಯಿಂದ ಹಿಂದೆ ಸರಿದರೂ, ಮಾನವೀಯ ಸೇವೆ ನನ್ನ ಜೀವನದ ಭಾಗವಾಗಿಯೇ ಮುಂದುವರಿಯಲಿದೆ” ಎಂದು ಅವರು ಸ್ಪಷ್ಟಪಡಿಸಿದರು.























