ಬೆಂಗಳೂರು: ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲ ಸುಧಾರಣೆ ಕಾರ್ಯಕ್ರಮ ವಿರೋಧ ಮಾಡುತ್ತ ಬಂದಿದೆ. ಅದೇ ರೀತಿ ವಿಬಿ ಜಿ ರಾಮ್ ಜಿ ಬಗ್ಗೆ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ನ ಬಣ್ಣ ಬಯಲು ಮಾಡಲು ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೊದಲನೆಯದಾಗಿ 100 ದಿಂದ 125 ದಿನ ಉದ್ಯೊಗ ಹೆಚ್ಚು ಮಾಡುವ ಕಾರ್ಮಿಕರಿಗೆ ದೀನ ದಲಿತರಿಗೆ ಹೆಚ್ಚು ಕೆಲಸ ಕೊಡುವ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೊದಿಯವರು ಮಾಡಿದ್ದಾರೆ. ಎರಡನೆಯದಾಗಿ ಆಡಳಿತಾತ್ಮಕವಾಗಿ ಹೆಚ್ಚು ಹಣ ಕೇಂದ್ರ ಸರ್ಕಾರ ನೀಡುತ್ತಿದೆ. ಮೂರನೆಯದಾಗಿ ಈಗಿರುವ ಮನರೆಗಾದಲ್ಲಿ ಭ್ರಷ್ಟಾಚಾರ ಮಾಡುವುದನ್ನು ತಡೆಯವುದು ಸರಿಯಾದ ಕ್ರಮವಲ್ಲವೇ? ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮುಂದುವರೆಸಿಕೊಂಡು ಹೋಗುವ ಹುನ್ನಾರ ಮಾಡಿರುವುದು ಬಯಲಾಗಿದೆ ಎಂದು ತಿಳಿಸಿದ್ದಾರೆ.
ನಿಗದಿತ ಸಮಯದಲ್ಲಿ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಕಾರ್ಮಿಕರಿಗೆ ಹಣ ಒದಗಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿದ್ದು ಸರಿಯಲ್ಲವೇ? ಗ್ರಾಮ ಪಂಚಾಯತಿಗೆ ಅಧಿಕಾರ ಕೊಟ್ಟು ಗ್ರಾಮಗಳ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಸಾಕಾರ ಮಾಡುವ ವಿಬಿ ಜಿ ರಾಮ್ ಜಿ ಯೋಜನೆ ಒಳ್ಳೆಯದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಲವಾರು ಸುಧಾರಣಾ ಕ್ರಮದಲ್ಲಿ ಸಾಗುತ್ತಿರುವ ಗ್ರಾಮೀಣ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ತುಂಬಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಇದರಿಂದ ಕಾಂಗ್ರೆಸ್ನ ಬಣ್ಣ ಬಯಲಾಗುತ್ತಿದೆ ಎನ್ನುವ ಕಾರಣಕ್ಕೆ ಅಪಪ್ರಚಾರ ಮಾಡುತ್ತಿದ್ದು, ಶೀಘ್ರವೇ ಅವರ ಬಣ್ಣ ಬಯಲಾಗಲಿದೆ. ಅದಕ್ಕೆ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ ಎಂದು ತಿಳಿಸಿದ್ದಾರೆ.






















