Home ನಮ್ಮ ಜಿಲ್ಲೆ ಬೆಳಗಾವಿ ಜಾತಿ ಗಣತಿ ಸಮೀಕ್ಷೆ ಹಣವೂ ಲೂಟಿ: ಅಶೋಕ

ಜಾತಿ ಗಣತಿ ಸಮೀಕ್ಷೆ ಹಣವೂ ಲೂಟಿ: ಅಶೋಕ

0
137
ಆರ್‌. ಅಶೋಕ

ಜಾತಿ ಗಣತಿ ಸಮೀಕ್ಷೆಗೆ ಮನೆ ಮನೆಗೆ ಬಂದಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಮನೆ ಮನೆಗೆ ಹೋಗದೇ ಸಮೀಕ್ಷೆ ಮಾಡಿರುವುದು ಸಿದ್ದರಾಮಯ್ಯನವರ ತಂತ್ರ. ಸಮೀಕ್ಷೆ ಮಾಡದೇ ಅದಕ್ಕೆ ಮೀಸಲಿಟ್ಟ 165 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುವುದರಲ್ಲಿ ನಂ.೧ ಆಗಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಪಾಳ ಮೋಕ್ಷ ತಿಂದಿದ್ದಾರೆ. ಈಗ ಜಾತಿ ಗಣತಿ ವರದಿ ತೋರಿಸಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಮುಸ್ಲಿಂ ಧರ್ಮದಲ್ಲೂ ೧೦ ಜಾತಿಗಳಿವೆ, ಒಂದೂ ಪ್ರತ್ಯೇಕಿಸಿಲ್ಲ. ಆದರೆ ಹಿಂದೂಗಳನ್ನು ಪೀಸ್ ಪೀಸ್ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯನವರು ಫೆವಿಕಲ್ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ ಆರ್.ಅಶೋಕ, ದೇವೇಗೌಡರು ಸಿದ್ದರಾಮಯ್ಯರನ್ನು ಮಂತ್ರಿ ಮಾಡಿದರು. ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಮಾಡಿದ್ದರು. ಅಧಿಕಾರ ಇರುವ ತನಕ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದರು. ಅಧಿಕಾರ ಕೊಡಲ್ಲ ಅಂದಾಗ ಕಾಂಗ್ರೆಸ್ ಸೇರಿ ಸಿಎಂ ಆದರು. ಅದಕ್ಕೆ ಈ ಹಿಂದೆ ಅಧಿವೇಶನದಲ್ಲಿ ಡಿಕೆಶಿ ಸಿಎಂ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದಿದ್ದರು. ಆ ಹೇಳಿಕೆಯಿಂದ ಸಿದ್ದರಾಮಯ್ಯರಲ್ಲಿ ನಡುಕ ಶುರುವಾಗಿದೆ ಎಂದರು.

ನವೆಂಬರ್ ತಿಂಗಳಲ್ಲಿ ಮ್ಯಾರೇಜ್ ಟೈಂ (ಅಧಿಕಾರ ಬಿಟ್ಟು ಕೊಡುವ ಟೈಂ) ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಗ ಒಪ್ಪಿ ಕೊಂಡಿದ್ದ ಸಿದ್ದರಾಮಯ್ಯ ಈಗ ಮಾತು ತಪ್ಪುತ್ತಿದ್ದಾರೆ. ಅದಕ್ಕೆ ಈಗ ಸಿದ್ದರಾಮಯ್ಯ ಜಾತಿಗಣತಿ ವರದಿ ಮಂಡಿಸಿದ್ದಾರೆ. ಅಧಿಕಾರ ಬಿಟ್ಟು ಕೊಡದಿದ್ದರೆ ಕಾಂಗ್ರೆಸ್‌ನಲ್ಲಿ ದಂಗೆ ಆಗಲಿದೆ ಎಂದು ಆರ್.ಅಶೋಕ ಭವಿಷ್ಯ ನುಡಿದರು.