ಬಾಗಲಕೋಟೆ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಹಮ್ಮಿಕೊಂಡಿದ್ದ ಹೋರಾಟದ ಸಂದರ್ಭದಲ್ಲಿ ಮಹಾಲಿಂಗಪುರ ಬಳಿಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮುಧೋಳದ ಸಾಹಿನಗರದ ಸದಾಶಿವ ಗೋವಿಂದಗೌಡ ಕುಚನೂರ (26), ಮುಧೋಳ ಬಸವಲಿಂಗನಗರದ ಕಿರಣ ಪ್ರಹ್ಲಾದ ಪಾಳೋಜಿ (29), ಮುಧೋಳ ಆನಂದ ನಗರದ ಆದರ್ಶ ರಮೇಶ ತೇಲಿ (26), ರೂಗಿ ಗ್ರಾಮದ ಶ್ರೀಕಾಂತ ಗಂಗಪ್ಪ ಬಾರ್ಕಿ (33), ಚಿಕ್ಕೂರ ಗ್ರಾಮದ ಮಂಜುನಾಥ ಸತ್ಯಪ್ಪ ನಾಯಕ (39), ಯಡಹಳ್ಳಿ ಗ್ರಾಮದ ಕೃಷ್ಣ ಮಲ್ಲಪ್ಪ ನಾಯ್ಕ (38), ಸೊರಗಾಂವ ಗ್ರಾಮದ ಸಿದ್ದು ರಾಮಪ್ಪ ಯಲ್ಲಟ್ಟಿ (34), ಮುಧೋಳ ಜನತಾ ಪ್ಲಾಟ್ನ ಅಭಿಷೇಕ ಶಿವಪ್ಪ ತಳವಾರ (19), ಕುಳಲಿ ಗ್ರಾಮದ ಪ್ರವೀಣ ಸಂಗಪ್ಪ ಜಾಮಗೌಡ, ಮಳಲಿ ಗ್ರಾಮದ ಕಲ್ಮೇಶ ಸುಭಾಶ್ ಮಲಕನ್ನವರ (32), ರಬಕವಿ ಬನಹಟ್ಟಿ ತಾಲೂಕು ಸಂಗಾನಟ್ಟಿಯ ಸಿದ್ದಪ್ಪ ನಾಗಪ್ಪ ಉಳ್ಳಾಗಡ್ಡಿ (35), ನಾಗಪ್ಪ ಶಿವಪ್ಪ ಇಟ್ನಾಳ (56), ಜೀರಗಾಳ ಗ್ರಾಮದ ಮಂಜುನಾಥ ಗೋವಿಂದಗೌಡ ಲಕ್ಕಂ (36) ಅವರನ್ನು ಬಂಧಿಸಿದ್ದಾರೆ.
ನ. 13ರಂದು ಮಹಾಲಿಂಗಪುರ ಬಳಿಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ಬೆಳೆಗಾರ ಹೋರಾಟಗಾರರು ಹಾಗೂ ಕಾರ್ಖಾನೆ ಒಳಭಾಗದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿ ಕಾರ್ಖಾನೆ ಪರವಾಗಿದ್ದ ರೈತರ ಗುಂಪುಗಳು ಜಮಾಯಿಸಿದ್ದವು. ಈ ವೇಳೆ ಬ್ಯಾರಿಕೇಡ್ಗಳಖನ್ನು ತೆರವುಗೊಳಿಸಿದ್ದಲ್ಲೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
13 ಆರೋಪಿಗಳ ಪೈಕಿ 10 ಆರೋಪಿಗಳು ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಚಿತ್ರಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಇನ್ನು ಮೂವರನ್ನು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಆಧರಿಸಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಸ್ತಗೀರ ಮಾಡಿರುವ ಆರೋಪಿಗಳು ರೈತರೆಂದು ಬಿಂಬಿಸಿಕೊಂಡು ಗುಂಪಿನಲ್ಲಿ ಬಂದು ಕೃತ್ಯ ಎಸೆಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
























