ಬಾಗಲಕೋಟೆ: ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಚಾರದಲ್ಲಿ ವಾರ್ಷಿಕ 18 ಸಾವಿರ ಕೋಟಿ ನೀಡುವುದಾಗಿ ಹೇಳಿ ಬಜೆಟ್ನಲ್ಲಿ ಕೇವಲ 3 ಸಾವಿರ ಕೋಟಿ ಮೀಸಲಿಟ್ಟು, ಈ ಭಾಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಚುನಾವಣೆ ನಾವು ನಿರೀಕ್ಷೆ ಮಾಡಿರಲಿಲ್ಲ. ಎಚ್.ವೈ. ಮೇಟಿಯವರ ನಿಧನದಿಂದ ತೆರವಾದ ಸಂದರ್ಭದಲ್ಲಿ ನಾಲ್ಕು ರಾಜ್ಯಗಳ ಜೊತೆಗೆ ಈ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. 2023 ರ ಚುನಾವಣೆಗೂ ಈಗ ನಡೆಯುತ್ತಿರುವ ಚುನಾವಣೆಗೂ ಬಹಳಷ್ಟು ರಾಜಕೀಯ ಬದಲಾವಣೆ ಆಗಿದೆ. ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹುಸಿಯಾಗಿದೆ. ಭ್ರಮ ನಿರಸನ ಆಗಿದೆ. ಅಷ್ಟೇ ಅಲ್ಲ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕೆ ಇದೆ. ಕೊವಿಡ್ ಇದ್ದರೂ. ಕೂಡ ನಾವು ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟಿದ್ದೇವು. ಈಗಾಗಲೇ ನಾಲ್ಕು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನು ಮೂರು ಬಜೆಟ್ ಮಂಡಿಸಿದರೆ ಹೊಸದಾಗಿ ಆರರಿಂದ ಏಳು ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನರ ಮೇಲೆ ಹೊರಿಸುತ್ತಾರೆ. ಅದನ್ನು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಕೇಂದ್ರದಿಂದ ಹೆಚ್ಚು ಅನುದಾನ: 14ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಯುಪಿಎ ಅವಧಿಯಲ್ಲಿ ಕೊಟ್ಟ ಹಣಕ್ಕಿಂತ 15ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಎನ್ಡಿಎ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದೆ. ರೈಲ್ವೆಗೆ ಅತಿ ಹೆಚ್ಚು ಹಣ ಕೊಟ್ಟಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 700 ಕೋಟಿ ರೂ. ಬರುತ್ತಿತ್ತು. ಈಗ 7 ಸಾವಿರ ಕೋಟಿ ರೂ. ಬರುತ್ತಿದೆ. ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ. ಜಿಎಸ್ಟಿ ದರ ಇಳಿಸಿರುವುದು ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಜನ ಸಾಮಾನ್ಯರು ಆರ್ಥಿಕ ಭಾರ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರು. ಜನರ ಮೇಲಿನ ತೆರಿಗೆ ಕಡಿಮೆ ಮಾಡಿದರೆ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದರೆ ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಸಿಎಂ ಉದ್ದಟತನ: ಜಲ ಜೀವನ ಮಿಷನ್ ಸರಿಯಾಗಿ ಜಾರಿ ಮಾಡಿಲ್ಲ. ಅನೇಕ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಯುದ್ಧದ ಪರಿಣಾಮವಾಗಿ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ಆರ್ಥಿಕ ವ್ಯವಹಾರ ನಿಂತು ಹೋಗಿದೆ. ಭಾರತದಲ್ಲಿ ಯಾವುದೇ ತೊಂದರೆಯಾಗಿಲ್ಲ. ಎಲ್ಲರ ಸಹಕಾರ ಬೇಕು ಎಂದು ಸಿಎಂಗಳ ಸಭೆ ಕರೆದರೆ ಇವರು ಉದ್ದಟತನ ತೋರಿಸುತ್ತಾರೆ. ಆ ಸಭೆಗೆ ಹೋಗದೇ ಮಂತ್ರಿಗಳನ್ನು ಕಳುಹಿಸುತ್ತಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇರಳ ಸಿಎಂ ಹಾಗೂ ಪ್ರತಿಪಕ್ಷಗಳ ಸಿಎಂಗಳು ಪ್ರಧಾನಿ ಸಭೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ನೀತಿ ಆಯೋಗದ ಸಭೆಗೂ ಹೋಗುವುದಿಲ್ಲ. ರಾಜ್ಯದ ಹಿತ ಕಾಯುವ ಜವಾಬ್ದಾರಿ ಇರುವವರು ತಮ್ಮ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಭಾಗದಲ್ಲಿ ಮುಳುಗಡೆ ಪ್ರದೇಶದ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ. ಮೊನ್ನೆ ಬಂದು ಸುಮಾರು 400 ಕೋಟಿ ರೂ. ಹಂಚಿದ್ದೇವೆ ಎಂದು ಹೇಳಿದ್ದಾರೆ. ಇವರೇ ಮೂರು ತಿಂಗಳ ಹಿಂದೆ ಅಕ್ಟೋಬರ್ 9, 2025ರಂದು ಆದೇಶ ಮಾಡಿದ್ದರು. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಭೂಸ್ವಾಧೀನ ಕೈ ಅಗತ್ಯವಿರುವ ಸುಮಾರು 75 ಸಾವಿರ ಕೋಟಿ ರೂ. ಮುಂದಿನ ನಾಲ್ಕು ವರ್ಷ ಭರಿಸಲು ವಾರ್ಷಿಕ 18 ಸಾವಿರ ಕೋಟಿ ರೂ. ಒದಗಿಸಲು ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿದೆ ಎಂದು ಹೇಳಿದ್ದರು.
ಸುಮಾರು ನಾಲ್ಕು ತಿಂಗಳ ನಂತರ ಬಜೆಟ್ ಮಾಡಿದ್ದಾರೆ ಬಜೆಟ್ನಲ್ಲಿ 3 ಸಾವಿರ ಕೋಟಿ ಇಟ್ಟಿದ್ದಾರೆ. ಅವರೇ ಮಾಡಿರುವ ಆದೇಶ, ಅದರ ಹಿಂದಿನ ವರ್ಷ ಭೂಸ್ವಾಧಿನಕ್ಕೆ ಪರಿಹಾರ ಕೊಡಬೇಕೆಂದು ರೈತರು ಕೋರ್ಟ್ಗೆ ಹೋದರೆ, ನೀರಾವರಿ ಇಲಾಖೆ ಸೆಕೆಟರಿ ಕೋರ್ಟ್ಗೆ ಪರಿಹಾರ ಕೊಡಲು ತಮ್ಮ ಬಳಿ ಹಣ ಇಲ್ಲ ಎಂದು ಅಪಿಡವಿಟ್ ಕೊಡುತ್ತಾರೆ. ಜನರ ಕಣ್ಣಿಗೆ ಮಣ್ಣು ಹಾಕಲು 18 ಸಾವಿರ ಕೋಟಿ ಪ್ರತಿ ವರ್ಷ ಕೊಡುತ್ತೇವೆ ಎಂದು ಹೇಳಿ 3 ಸಾವಿರ ಕೋಟಿ ಬಜೆಟ್ನಲ್ಲಿ ಇಟ್ಟರೆ ಹೇಗೆ ಪರಿಹಾರ ಹಂಚುತ್ತಾರೆ. ಜನರು ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜಮೀನು ಕಳೆದುಕೊಂಡಿದ್ದಾರೆ. ಊರಿಗೆ ಊರೆ ಮುಳುಗುತ್ತಿವೆ. ಎರಡನೇ ಹಂತದಲ್ಲಿಯೂ ಮುಳುಗುತ್ತವೆ. ನಗರ ಪ್ರದೇಶದಲ್ಲಿ ಎಂಟರಿಂದ ಹತ್ತು ವಾರ್ಡ್ ಮುಳುಗುತ್ತವೆ. ಈಗ ಮೂಗಿಗೆ ತುಪ್ಪ ಹಚ್ಚಲು ಆಜ್ಞೆ ಮಾಡಿ, ಈಗ 3 ಸಾವಿರ ಕೋಟಿ ಖರ್ಚು ಮಾಡಿ ಎಂದು ಹೇಳಿ, ಅಧಿಕಾರಿಗಳಿಗೆ ಅವನೂ ಖರ್ಚು ಮಾಡಬೇಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಹಿಂದೆ ಕೃಷ್ಣೆಯ ಮೇಲೆ ಆಣೆ ಮಾಡಿ 10 ಸಾವಿರ ಕೋಟಿ ಪ್ರತಿ ವರ್ಷ ಕೊಡುತ್ತೇವೆ ಎಂದು ಈ ಬಾಗದ ಜನರಗಿ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದರು.
ಹೆಚ್ಚಿನ ಅನುದಾನ: ಬಾಗಲಕೋಟೆ ನವನಗರಕ್ಕೆ ಕಾಂಗ್ರೆಸ್ ಕಾಲದಲ್ಲಿ ಎಷ್ಟು ಕೊಟ್ಟಿದ್ದೀರಿ ಸ್ಪಷ್ಟಪಡಿಸಿ, ಚರಂತಿಮಠ ಶಾಸಕರಾಗಿದ್ದಾಗ, ಕಾರಜೋಳ ನೀರಾವರಿ ಮಂತ್ರಿಯಾಗಿದ್ದಾಗ ನಾನು ಸಿಎಂ ಆಗಿದ್ದಾಗ ಬಾಗಲಕೋಟೆಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಈಗ ಮೇಟಿಯವರ ಕೊನೆಯ ಆಸೆಯಂತೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ಜೀವಂತ ಇದ್ದಾಗ ಯಾಕೆ ಮಾಡಲಿಲ್ಲ. ನಾವಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ಮಾಡಿದ್ದೇವು. ಇವರ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಈಗ ಚುನಾವಣೆ ಸಂದರ್ಭದಲ್ಲಿ ದುಡ್ಡು ಬಳಸಿ ಮೆಡಿಕಲ್ ಕಾಲೇಜು ಮಾಡುವುದಾಗಿ ಹೇಳುತ್ತಿದ್ದಾರೆ. 2023 ರ ಚುನಾವಣೆಗೂ 2026ರ ಚುನಾವಣೆಗೆ ಬಹಳ ವ್ಯತ್ಯಾಸ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ. ಅವರು ಹಣ ಚೆಲ್ಲುತ್ತಾರೆ. ಈಗ ರಾಜಶಕ್ತಿ ಪ್ರಜಾಶಕ್ತಿ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಪಜಾಶಕ್ತಿ ಗೆಲ್ಲುತ್ತದೆ. ಈ ಚುನಾವಣೆಯನ್ನು ಜನ ಸಾಮಾನ್ಯರು, ನಮ್ಮ ಕಾರ್ಯಕರ್ತರೇ ಮಾಡುತ್ತಾರೆ ಎಂದು ಹೇಳೀದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ. ಕುಮಾರಸ್ವಾಮಿ ತಮ್ಮ ಕ್ಷೇತ್ರದಲ್ಲಿಯೇ ಗೆಲ್ಲಲು ಆಗಲಿಲ್ಲ, ಈ ಉಪ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆ ಎಂದು ಪಶ್ನಿಸಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಸಿಎಂ ಆಗಿಯೇ ಸಿದ್ದರಾಮಯ್ಯ 30 ಸಾವಿರ ಅಂತರದಿಂದ ಸೋತಿದ್ದಾರೆ. ನಾವು ನಾಲೈದು ಬಾರಿ ನಮ್ಮ ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಬಾದಾಮಿ ಜನ ಅವರ ಕೈ ಹಿಡಿದರು. ಅವರು ಮತ್ತೊಮ್ಮೆ ಬಾದಾಮಿಗೆ ಯಾಕೆ ಬರಲಿಲ್ಲ. ಈ ಸರ್ಕಾರದ ಬಳಿ ಹಣ ಇಲ್ಲ. ನಾವು ಜಮೀನು ವಶಪಡಿಸಿಕೊಳ್ಳುವುದಿಲ್ಲ. ಮುಳುಗಡೆ ಮಾಡಿ ಕೊಡುವುದಿಲ್ಲ. ಎಂದು ಹೇಳಿದ್ದರು. ಈಗ ಸ್ಕಿನ್ ಗೇಟ್ ಹಾಕುತ್ತೇವೆ ಎನ್ನುತ್ತಾರೆ. ನೀರು ಹಿಡಿಯದಿದ್ದರೆ ರೈತರಿಗೆ ಏನು ಪ್ರಯೋಜನ. ಇಷ್ಟು ಬಹಿರಂಗವಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಯುಪಿಎ ಸರ್ಕಾರ ಆರ್ ಆಂಡ್ ಆರ್ ಪಾಲಿಸಿ ಇದೆ. ಅದರ ಪಕಾರ ಇವರು ಕೆಲಸ ಮಾಡಬೇಕು. ಸಂಪೂರ್ಣ ಆರ್. ಆಂಡ್ ಆರ್ ಕೆಲಸ ಮುಗಿಸಿ ಆರು ತಿಂಗಳ ನಂತರ ನೀರು ಹಿಡಿದು ಯೋಜನೆ ಕಾರ್ಯಗತ ಮಾಡಬೇಕೆಂಬ ನಿಯಮ ಇದೆ. ಅದನ್ನು ಮಾಡಲು 75 ಸಾವಿರ ಕೋಟಿ ಬೇಕು. ಮತ್ತೆ ಇವರು ನ್ಯಾಯ ಒದಗಿಸಿಕೊಡುತ್ತೇವೆ ಎಂದು ಹೇಳುತ್ತಾರೆ ಎಂದರು.
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂರು ರಾಜ್ಯಗಳ ವ್ಯಾಜ್ಯ ಇದೆ. ಎರಡು ರಾಜ್ಯಗಳ ವಾದ ಮಂಡನೆಯಾಗಿದೆ. ಕೋರ್ಟ್ನಲ್ಲಿರುವ ಪ್ರಕ್ರಿಯೆಗೆ ಕರ್ನಾಟಕದ ವಕೀಲರು ಏನು ಮಾಡಿದ್ದಾರೆ. ಡ್ಯಾಮ್ ಎತ್ತರ 524 ಮೀಟರ್ ಎತ್ತರ ಮಾಡುವ ಕುರಿತು ಮಹಾರಾಷ್ಟ್ರದವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ನಾನು ಸದನದಲ್ಲಿ ಹೇಳಿದಾಗ ಇವರು ಅಫಿಡವಿಟ್ ಹಾಕಿದ್ದಾರೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಗ್ಯಾರೆಂಟಿ ಯೋಜನೆಗಳು ಸ್ವಂತ ಆರ್ಥಿಕ ಬಲವರ್ಧನೆ ಮಾಡಿ ಎಷ್ಟಾದರೂ ಕೊಡಲಿ, ಎಲ್ಲ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿ ಯಾವುದೇ ರೀತಿಯ ಅಭಿವೃದ್ಧಿ ಮಾಡದ ಪರಿಸ್ಥಿತಿಗೆ ತಂದರೆ ಯಾವ ಗ್ಯಾರೆಂಟಿ ಬಂದರೇನು ಎಂದು ಪ್ರಶ್ನಿಸಿದರು.























