ಬಾಗಲಕೋಟೆ: ಹೆಜ್ಜೇನು ದಾಳಿಯಿಂದ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ನವನಗರದಲ್ಲಿ ನಡೆದಿದೆ.
ನವನಗರ 32ನೇ ಸೆಕ್ಟರ್ನ ನಿವಾಸಿ ಮೊಹಮ್ಮದ ರಫೀಕ್ ಗಾಯಾಳು. ನವನಗರದ ನಗರಸಭೆ ಬಳಿಯ ಕಟ್ಟಡವೊಂದರಲ್ಲಿ ಜೇನು ಗೂಡು ಕಟ್ಟಿದ್ದು, ಏಕಾಏಕಿ ಮೊಹಮ್ಮದ ರಫೀಕ್ ಅವರ ಮೇಲೆ ಜೇನುಹುಳುಗಳು ದಾಳಿ ಮಾಡಿವೆ. ಇತರರು ಓಡಲು ಆರಂಭಿಸಿದ್ದು, ಕಿಲೋಮೀಟರ್ ಗಟ್ಟಲೇ ಓಡಿದರೂ ಅವರನ್ನು ಜೇನುಗಳು ಬೆನ್ನಟ್ಟಿ ದಾಳಿ ನಡೆಸಿವೆ.
ಈ ವೇಳೆ ಸ್ಥಳದಲ್ಲಿದ್ದ ಯುವ ಹೇಮಂತ ಚೂರಿ ಹಾಗೂ ಸ್ನೇಹಿತರು ರಫೀಕ್ ಅವರ ನೆರವಿಗೆ ಧಾವಿಸಿ ಕಾರಿನಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಮುಖದಲ್ಲಿ 50ಕ್ಕೂ ಹೆಚ್ಚು ಮುಳ್ಳುಗಳು ಕಾಣಿಸಿಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.























