ಶ್ರೀರಂಗಪಟ್ಟಣ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ನಾಗರತ್ನಮ್ಮ ನಾರಾಯಣ ಭಟ್ಟ ಜ್ಞಾನ ಮಂದಿರದಲ್ಲಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶದ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.
ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಭಟ್ ಮತ್ತು ಮಂಗಳ ದಂಪತಿಗಳು ಈ ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಸಾರ್ವಜನಿಕರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನವರಾತ್ರಿಯ ಮಹತ್ವ ಸಾರುವ ಮಾದರಿಯಲ್ಲಿ ದಸರಾ ವೈಭವ ಬಿಂಬಿಸುವ ಬೊಂಬೆಗಳ ಅನಾವರಣಗೊಂಡಿದ್ದು, ವಿಶೇಷ ಉಡುಗೆ ತೊಡುಗೆಗಳ ಮೂಲಕ ಬೊಂಬೆಗಳಿಗೆ ಜೀವ ತುಂಬಿದ್ದಾರೆ.
ಈ ಬೊಂಬೆ ಪ್ರದರ್ಶನದಲ್ಲಿ ಜಂಬೂ ಸವಾರಿ, ರಾಜ ಪರಿವಾರ, ನವ ದುರ್ಗೆಯರು, ಮೈಸೂರಿನ ಗರುಡೋತ್ಸವ, ಪ್ರಣಯ ಗಣಪತಿ, ವಾದ್ಯ ಮೇಳ, ಸಪ್ತ ಮಾತೃಕೆಯರು, ಸಪ್ತ ಋಷಿಗಳು, ನವಧಾನ್ಯಗಳು ಸೇರಿದಂತೆ ವಿವಿಧ ರೀತಿಯ ಬೊಂಬೆಗಳು ಗಮನ ಸೆಳೆಯುತ್ತಿವೆ.
ಜೊತೆಗೆ ದೇವಾಲಯ, ಯಾಗಶಾಲೆ, ಉಷ್ಣ ಅಂಗಡಿ, ಚಿನ್ನಾಭರಣ ಅಂಗಡಿ, ಕನ್ನೆಯರ ಜಲಕ್ರೀಡೆ, ಕಿರಾಣಿ ಅಂಗಡಿ, ಗ್ರಾಮೀಣ ಭಾರತ, ವಿದೇಶಿ ಪ್ರವಾಸಿಗರು ಹಾಗೂ ಜಾನಪದ ಕಲೆಗಳಿಗೆ ಬೊಂಬೆಗಳನ್ನು ಮಾದರಿಯನ್ನಾಗಿ ಇಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಮಾದರಿ ಸೇರಿದಂತೆ ಪುರಾತನ ಆಚಾರ ವಿಚಾರಗಳನ್ನೊಳಗೊಂಡ ಚಿತ್ರಣಗಳನ್ನು ಗೊಂಬೆಗಳ ಮೂಲಕ ಅನಾವರಣ ಮಾಡಲಾಗಿದೆ.
ಕಳೆದ 10 ವರ್ಷಗಳಿಂದ ಇವರು ಬೊಂಬೆಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡುತ್ತಾ ಬಂದಿದ್ದು, ನವರಾತ್ರಿ ಆರಂಭದ ದಿನದಿಂದ 15 ದಿನಗಳ ವರೆಗೆ ಬೊಂಬೆಗಳ ಪ್ರದರ್ಶನದಕ್ಕೆ ಇಡಲಾಗಿರುತ್ತದೆ. ಪ್ರತೀನಿತ್ಯ ಬೆಳಿಗ್ಗೆ 10 ರಿಂದ ರಾತ್ರಿ 5 ಗಂಟೆ ವರೆಗೆ ಈ ಬೊಂಬೆಗಳನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಮತ್ತೊಂದು ವಿಶೇಷವಾಗಿದೆ.