Home Advertisement
Home ನಮ್ಮ ಜಿಲ್ಲೆ ತುಮಕೂರು “ಅಧ್ಯಾತ್ಮವೇ ಸೇವೆಗೆ ಆಧಾರ” – ತುಮಕೂರಿನಲ್ಲಿ ರಾಷ್ಟ್ರಪತಿ ಸಂದೇಶ

“ಅಧ್ಯಾತ್ಮವೇ ಸೇವೆಗೆ ಆಧಾರ” – ತುಮಕೂರಿನಲ್ಲಿ ರಾಷ್ಟ್ರಪತಿ ಸಂದೇಶ

0
99

ಕರ್ನಾಟಕದ ಸೇವಾ ಪರಂಪರೆ ಮೆಚ್ಚಿದ ರಾಷ್ಟ್ರಪತಿ ಮುರ್ಮು

ತುಮಕೂರು: ಕರ್ನಾಟಕದ ಸಿದ್ದಗಂಗಾ ಮಠದಲ್ಲಿ ನಡೆದ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಆಧ್ಯಾತ್ಮ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರಸೇವೆ ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದರು.

“ಸೇವೆಯೇ ಶ್ರೇಷ್ಠತೆ” – ರಾಷ್ಟ್ರಪತಿ ಸಂದೇಶ : ಗುರುವಂದನಾ ಮಹೋತ್ಸವದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಶಿವಕುಮಾರ ಸ್ವಾಮೀಜಿಯವರಂತಹ ಮಹನೀಯರು ಸಮಾಜ ಮತ್ತು ರಾಷ್ಟ್ರದ ಆತ್ಮಸ್ವರೂಪವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು. 2019ರಲ್ಲಿ ದೇಹತ್ಯಾಗ ಮಾಡಿದರೂ, ಅವರ ಆಧ್ಯಾತ್ಮಿಕ ಶಕ್ತಿ ಇಂದಿಗೂ ಸಮಾಜವನ್ನು ದಾರಿದೀಪವಾಗಿಸಿದೆ ಎಂದು ಅವರು ಹೇಳಿದರು.

ಬಡವರು, ಹಿಂದುಳಿದವರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರು ನಿರ್ಮಿಸಿದ ಸೇವಾ ಪರಂಪರೆ ಅನನ್ಯವಾಗಿದೆ ಎಂದು ಕೊಂಡಾಡಿದರು.

ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಮಠದ ಕೊಡುಗೆ : ಸಿದ್ದಗಂಗಾ ಮಠವು ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಮತ್ತು ನಿರ್ವಹಣಾ ವಿದ್ಯಾಭ್ಯಾಸದವರೆಗೆ ವಿಶಾಲ ವ್ಯವಸ್ಥೆ ಒದಗಿಸುತ್ತಿರುವುದು ಪ್ರಶಂಸನೀಯ ಎಂದು ರಾಷ್ಟ್ರಪತಿಗಳು ಹೇಳಿದರು. ಹಾಗೆಯೇ, ಮಠದ ಆಶ್ರಯದಲ್ಲಿ ಸ್ಥಾಪಿತವಾದ ಆಸ್ಪತ್ರೆಗಳು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದೂ ಗಮನಾರ್ಹ ಎಂದರು.

ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆ: ಜ್ಞಾನ ದಾನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಶಿಕ್ಷಣವೇ ವ್ಯಕ್ತಿತ್ವ ವಿಕಾಸ ಮತ್ತು ಸ್ವಾವಲಂಬನೆಗೆ ದಾರಿ ತೋರಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮಠವು ಸಮಾನತೆಯ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಕರ್ನಾಟಕಕ್ಕೆ ರಾಷ್ಟ್ರಪತಿ ಶ್ಲಾಘನೆ : ಕರ್ನಾಟಕ ರಾಜ್ಯವು ಸಾರ್ವಜನಿಕ ಸೇವೆ, ಆಧ್ಯಾತ್ಮ ಮತ್ತು ಆಧುನಿಕ ಪ್ರಗತಿಯ ಉತ್ತಮ ಉದಾಹರಣೆಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ರಾಜ್ಯದ ಪರಿಶ್ರಮಿ ಜನತೆ ರಾಷ್ಟ್ರ ನಿರ್ಮಾಣದಲ್ಲಿ ಸದಾ ಮುಂಚೂಣಿಯಲ್ಲಿದ್ದು, ಮುಂದೆಯೂ ಇದೇ ರೀತಿಯಲ್ಲಿ ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.