ಸಹಕಾರಿ ಕ್ಷೇತ್ರದ ಹಿರಿಯ ನಾಯಕ ಹಳೇಮನೆ ಶಿವನಂಜಪ್ಪ ನಿಧನ

0
4

ತುಮಕೂರು: ಸಹಕಾರಿ ಕ್ಷೇತ್ರದ ಹಿರಿಯ ನಾಯಕ, ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ತುಮುಲ್)ದ ಮಾಜಿ ಅಧ್ಯಕ್ಷ ಹಳೇಮನೆ ಶಿವನಂಜಪ್ಪ (79) ಅವರು ಶನಿವಾರ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಿವನಂಜಪ್ಪ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಇಹಲೋಕ ತ್ಯಜಿಸಿದರು. ಅವರ ನಿಧನದಿಂದ ಸಹಕಾರಿ ಕ್ಷೇತ್ರಕ್ಕೆ ಭಾರೀ ನಷ್ಟ ಸಂಭವಿಸಿದ್ದು, ಜಿಲ್ಲೆಯಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ

ಸುದೀರ್ಘ ಕಾಲ ತುಮುಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶಿವನಂಜಪ್ಪ ಅವರು, ತುಮಕೂರು ಹಾಲು ಒಕ್ಕೂಟವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತರ ಆರ್ಥಿಕ ಸಬಲೀಕರಣಕ್ಕೆ ಸದಾ ಆದ್ಯತೆ ನೀಡುತ್ತಿದ್ದ ಅವರು, ಹೈನುಗಾರಿಕೆಯನ್ನು ಕೇವಲ ಉಪಕಸುಬಾಗಿ ಉಳಿಸದೇ, ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನೇಕ ನವೀನ ಯೋಜನೆಗಳನ್ನು ಜಾರಿಗೆ ತಂದಿದ್ದರು.

ರೈತಪರ ಚಿಂತನೆ, ಸರಳ ವ್ಯಕ್ತಿತ್ವ ಹಾಗೂ ಸಹಕಾರಿ ಮೌಲ್ಯಗಳಿಗೆ ಬದ್ಧತೆಯ ಮೂಲಕ ಶಿವನಂಜಪ್ಪ ಅವರು ಜಿಲ್ಲೆಯ ಹಲವಾರು ಸಹಕಾರಿ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಹಾಲು ಉತ್ಪಾದಕರ ಹಿತ ಕಾಯುವಲ್ಲಿ ಅವರ ಕೊಡುಗೆ ಅನನ್ಯವಾಗಿದ್ದು, ಅನೇಕ ಯುವ ನಾಯಕರು ಅವರಿಂದ ಪ್ರೇರಣೆ ಪಡೆದಿದ್ದಾರೆ.

ಇದನ್ನೂ ಓದಿ: ಗಾನವಿ–ಸೂರಜ್ ದುರಂತ: ಎರಡು ಕುಟುಂಬಗಳನ್ನು ನಡುಗಿಸಿದ ಹೃದಯವಿದ್ರಾವಕ ಕಥೆ

ಮೃತರು ಅಪಾರ ಬಂಧುಬಳಗ, ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಗಣ್ಯರನ್ನು ಅಗಲಿದ್ದಾರೆ. ಶಿವನಂಜಪ್ಪ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬದ ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲೇ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

Previous articleಬೆಳಗಾವಿ: ಕಾರು ಡಿಕ್ಕಿ ಹೊಡೆದು 13 ದ್ವಿಚಕ್ರ ವಾಹನಗಳು ನಜ್ಜುಗುಜ್ಜು