ಧಾರವಾಡ: ರೈತರಿಗೆ ಒಂದೇ ಸೂರಿನಡಿ ಕೃಷಿ ಬಗೆಗೆ ಮಾಹಿತಿಯ ಜೊತೆಗೆ ಕೃಷಿ ಉಪಕರಣಗಳು ದೊರೆಯಲಿ ಎಂಬ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯದಿಂದ ಪ್ರಾರಂಭಿಸಲಾದ ಕೃಷಿ ಮೇಳ ಈ ಬಾರಿ ಸೆ. 13ರಿಂದ 16ರ ವರೆಗೆ ನಡೆಯಲಿದ್ದು, ಇದಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನಗಳು, ಅನ್ವೇಷಣೆಗಳು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪಿಸುವುದು ಮೇಳದ ಉದ್ದೇಶವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳ ನಡೆಸುತ್ತಿದ್ದು, ಮಣ್ಣಿನ ಫಲವತ್ತತೆ ಹಾಗೂ ಸಾಂಪ್ರದಾಯಿಕ ತಳಿಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ರೈತರಿಗೆ ತಜ್ಞರಿಂದ ಮಾಹಿತಿ ಒದಗಿಸಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೈತರಿಂದ ರೈತರಿಗಾಗಿ: ಪ್ರತಿದಿನ ಮಧ್ಯಾಹ್ನ 2.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಸೆ. 13ರಂದು ಎಕರೆಗೆ 100 ಟನ್ ಕಬ್ಬು ಇಳುವರಿಗೆ ವಿಶೇಷ ತಾಂತ್ರಿಕತೆಗಳು, ಸೆ. 14ರಂದು ಅಧಿಕ ಇಳುವರಿಗಾಗಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ಸೆ. 15ರಂದು ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು, ಸೆ. 16ರಂದು ಹೈ-ಟೆಕ್ ತೋಟಗಾರಿಕೆ ತಂತ್ರಜ್ಞಾನ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6ರಿಂದ 7ರ ವರೆಗೆ ವಿವಿಧ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
3516.91 ಕ್ವಿ. ಬೀಜ ದಾಸ್ತಾನು: ಪ್ರಸ್ತುತ ಕೃಷಿ ಮೇಳದಲ್ಲಿ ಹಿಂಗಾರು ಹಂಗಾಮಿನ ಬೆಳೆಗಾಗಿ 219.37 ಕ್ವಿ. ಜೋಳ, 581.34 ಕ್ವಿ. ಗೋಧಿ, 2548 ಕ್ವಿ ಕಡಲೆ, 81.4 ಕ್ವಿ. ಕುಸುಬೆ, 45.2 ಕ್ವಿ. ಉದ್ದು, 29 ಕ್ವಿ ಅಲಸಂದಿ, 10.8 ಕ್ವಿ ಶೇಂಗಾ, 1.8 ಕ್ವಿ ಊದಲು ಸೇರಿ ಒಟ್ಟು 3516.91 ಕ್ವಿ ಬೀಜ ದಾಸ್ತಾನು ಮಾಡಲಾಗಿದ್ದು, ಬೀಜ ಮೇಳದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
162 ಹೈಟೆಕ್ ಮಳಿಗೆಗೆಳು: ಕೃಷಿ ವಸ್ತು ಪ್ರದರ್ಶನಕ್ಕೆ 162 ಹೈಟೈಕ್ ಮಳಿಗೆ ಹಾಗೂ 272 ಸಾಮಾನ್ಯ ಮಳಿಗೆ, 99 ಯಂತ್ರೋಪಕರಣ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ 13 ಕ್ಷೇತ್ರ ಮಳಿಗೆಗಳು ಹಾಗೂ 29 ಆಹಾರ ಮಳಿಗೆಗಳನ್ನು ತೆರೆದಿದ್ದು, ಈಗಾಗಲೇ ಬುಕ್ ಆಗಿವೆ. ನರ್ಸರಿ, ಹಣಕಾಸು ಸಂಸ್ಥೆಗಳು, ನೀರಾವರಿ ಮತ್ತು ಕೃಷಿ ಉಪಕರಣಗಳು, ಕೃಷಿ ಯಂತ್ರೋಪಕರಣಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ಭಾರಿ ಯಂತ್ರೋಪಕರಣಗಳ ಪ್ರದಶನಕ್ಕೆ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯದ ಮಳಿಗೆಗಳು, ಬೀಜ ಘಟಕದ ಮಳಿಗೆಗಳು ಇರಲಿವೆ. ವಿಶೇಷತೆ ಎಂದರೆ ಈ ಬಾರಿ ಮಳೆಯಿಂದ ರಕ್ಷಣೆ ಇರುವಂತ ಉತ್ತಮ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಮೇಳದ ಆಕರ್ಷಣೆಗಳು: ಪ್ರಸ್ತುತ ಕೃಷಿ ಮೇಳದಲ್ಲಿ ಬೀಜ ಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಕೃಷಿ ನವೋದ್ಯಮಗಳು, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಪೀಡೆಗಳ ನಿರ್ವಹಣೆ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋನ್ ಬಳಕೆ, ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ, ಕೃಷಿ ಅರಣ್ಯ, ಪಶು ಸಂಗೋಪನೆ, ಜಾನುವಾರುಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ತಾಂತ್ರಿಕತೆ, ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ, ಸುಸ್ಥಿರತೆಗಾಗಿ ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಮತ್ತು ಸಾವಯವ ಕೃಷಿ, ಮಹಿಳೆಯರ ಸಬಲೀಕರಣಕ್ಕೆ ಸಮುದಾಯ ವಿಜ್ಞಾನ ತಾಂತ್ರಿಕತೆಗಳು ಕೃಷಿ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.
ವಿಮೆಗೆ ಒಳಪಡಿಸಲಾಗಿದೆ: ಕೃಷಿ ಮೇಳದಲ್ಲಿ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಮೇಳದ ಆವರಣವನ್ನು ವಿಮಾ ವ್ಯಾಪ್ತಿಗೊಳಪಡಿಸಲಾಗಿದೆ. ಅಗ್ನಿಶಾಮಕ ವಾಹನ, ಮೊಬೈಲ್, ಎಟಿಎಂ ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳ ಭೇಟಿಗಾಗಿ ವಾಹನಗಳ ವ್ಯವಸ್ಥೆ, ವೇದಿಕೆ ಕಾಯಕ್ರಮದ ನೇರ ಪ್ರಸಾರ ವ್ಯವಸ್ಥೆ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಹಾಗೂ ಪೊಲೀಸ್ ಸಹಾಯ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.