ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಿಸುವ ಸರ್ಕಾರದ ಯೋಜನೆಗೆ ಸ್ಥಳೀಯರಿಂದ ಕಳೆದೊಂದು ವರ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ನಿರ್ಲಕ್ಷ ವಹಿಸಿರುವ ಸರ್ಕಾರದ ನಡೆಯನ್ನು ವಿರೋಧಿಸಿ ಅಂಕೋಲಾ ಪಟ್ಟಣದಲ್ಲಿ ಇಂದು (ಮಂಗಳವಾರ) ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಸಾವಿರಾರು ಸಂಖ್ಯೆಯಲ್ಲಿ ನಾಗರೀಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಘಟನೆ ಜರುಗಿದೆ.
ಸುಮಾರು ನೂರಕ್ಕೂ ಹೆಚ್ಚು ಹಳ್ಳಿಗಳಿಂದ ಬಂದ ಗ್ರಾಮಸ್ಥರು ಅಂಕೋಲಾ ಪಟ್ಟಣದ ಜೈ ಹಿಂದ್ ಸರ್ಕಲ್ ಬಳಿ ಸೇರಿ ಕೇಣಿ ಬಂದರು ವಿರೋಧಿ ಹೋರಾಟ ಸಮಿತಿಯ ಕರೆಗೆ ಸ್ಪಂದಿಸಿದರು. ಕಳೆದ ಒಂದು ವರ್ಷದಿಂದ ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದರು.
ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲೂ ನಾಗರೀಕರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಸರಕಾರ ನಿರ್ಲಕ್ಷತನ ತಾಳಿರುವುದನ್ನು ಖಂಡಿಸಿದ ಪ್ರತಿಭಟನಾ ನಿರತ ಮುಖಂಡರು ಶಾಸಕರು, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಕರಾಳ ದಿನಾಚರಣೆಯನ್ನಾಗಿ ಆಚರಿಸಿ ಬಂದರು ಯೋಜನೆಯ ಅಣಕು ಶವದ ಪ್ರತಿಕೃತಿಯೊಟ್ಟಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ನಾಗರೀಕರ ಬೇಡಿಕೆಗೆ ಸಹಕರಿಸದ ಸರಕಾರದ ನಡೆಯ ಕುರಿತಂತೆ ನಾಗರಿಕರು ಬೇಸರ ವ್ಯಕ್ತಪಡಿಸಿದರು. ಬಂದರು ನಿರ್ಮಾಣ ಯೋಜನೆಯನ್ನು ಬಲವಂತವಾಗಿ ಹೇರುವ ಪ್ರಯತ್ನ ನಡೆದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನುವ ಸಂದೇಶವನ್ನು ಹೋರಾಟಗಾರರು ರವಾನಿಸಿದ್ದಾರೆ.


























