Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬಿಹಾರ ಚುನಾವಣೆ ಎಫೆಕ್ಟ್: ‘ಸೈಟ್’ ರಾಜಕೀಯ, ಡಿಕೆಶಿ ಭರವಸೆಗೆ ಜೆಡಿಎಸ್ ಕೆಂಡಾಮಂಡಲ!

ಬಿಹಾರ ಚುನಾವಣೆ ಎಫೆಕ್ಟ್: ‘ಸೈಟ್’ ರಾಜಕೀಯ, ಡಿಕೆಶಿ ಭರವಸೆಗೆ ಜೆಡಿಎಸ್ ಕೆಂಡಾಮಂಡಲ!

0
137

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಕಾವು ಕರ್ನಾಟಕದ ರಾಜಕೀಯ ಅಂಗಳಕ್ಕೂ ತಟ್ಟಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ‘ಬಿಹಾರ ಸಂಘ’ಕ್ಕೆ ನಿವೇಶನ ನೀಡುವ ಭರವಸೆ ನೀಡಿದ್ದು, ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ.

ಜೆಡಿಎಸ್ ಈ ನಿರ್ಧಾರವನ್ನು ‘ಕನ್ನಡಿಗರಿಗೆ ಬಗೆದ ದ್ರೋಹ’ ಎಂದು ಬಣ್ಣಿಸಿದ್ದು, ಕಾಂಗ್ರೆಸ್‌ನ ‘ಓಲೈಕೆ ರಾಜಕಾರಣ’ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಜೆಡಿಎಸ್‌ನ ತೀವ್ರ ಆಕ್ರೋಶ: ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಕಿಡಿಕಾರಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದೆ. “ಒಂದು ಕಡೆ ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ಕೇಂದ್ರದ ವಿರುದ್ಧ ಹೋರಾಟದ ನಾಟಕವಾಡುವ ಕಾಂಗ್ರೆಸ್, ಇನ್ನೊಂದೆಡೆ ಕನ್ನಡಿಗರ ತೆರಿಗೆ ಹಣದಲ್ಲಿ, ಕನ್ನಡಿಗರ ಭೂಮಿಯನ್ನು ಪರರಾಜ್ಯದವರಿಗೆ ಚುನಾವಣಾ ಉಡುಗೊರೆಯಾಗಿ ನೀಡಲು ಹೊರಟಿದೆ. ಈ ಡೋಂಗಿತನಕ್ಕೆ ಧಿಕ್ಕಾರ,” ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೆ ಇದೇ ಕಾಂಗ್ರೆಸ್ ನಾಯಕರು, ಬಿಹಾರದಿಂದ ಬರುವ ವಲಸಿಗರಿಂದ ಕನ್ನಡಿಗರ ಉದ್ಯೋಗಾವಕಾಶಗಳು ಕಸಿಯಲ್ಪಡುತ್ತಿವೆ ಎಂದು ಆರೋಪಿಸಿದ್ದರು. ಆದರೆ ಈಗ ಬಿಹಾರ ಚುನಾವಣೆಯಲ್ಲಿ ಲಾಭ ಪಡೆಯಲು ಅದೇ ಸಮುದಾಯಕ್ಕೆ ಬೆಂಗಳೂರಿನಲ್ಲಿ ನಿವೇಶನ ನೀಡುವ ಆಮಿಷ ಒಡ್ಡುತ್ತಿದ್ದಾರೆ. ಇದು ‘ಯಾರದೋ ಜುಟ್ಟಿಗೆ ಮಲ್ಲಿಗೆ ಮುಡಿಸುವ’ ಕೆಲಸವಲ್ಲವೇ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?: ಈ ಭರವಸೆಯನ್ನು ನೀಡುವ ಮುನ್ನ, ಡಿ.ಕೆ. ಶಿವಕುಮಾರ್ ಬೆಂಗಳೂರಿನ ಅಭಿವೃದ್ಧಿಗೆ ಬಿಹಾರ ಮೂಲದ ಕಾರ್ಮಿಕರ ಕೊಡುಗೆಯನ್ನು ಶ್ಲಾಘಿಸಿದ್ದರು. “ಬಿಹಾರದ ಕಾರ್ಮಿಕ ಬಂಧುಗಳು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇಂತಹ ಅತ್ಯುತ್ತಮ ಕಟ್ಟಡಗಳು ನಿರ್ಮಾಣವಾಗಲು ಸಾಧ್ಯವಾಗುತ್ತಿರಲಿಲ್ಲ. ಅವರ ಶ್ರಮ ಅಪಾರ,” ಎಂದಿದ್ದರು.

ಅಲ್ಲದೆ, ಬಿಹಾರ ಚುನಾವಣೆಯಲ್ಲಿ ಮತ ಚಲಾಯಿಸಲು ಊರಿಗೆ ತೆರಳುವ ಕಾರ್ಮಿಕರಿಗೆ ಮೂರು ದಿನಗಳ ಕಾಲ ರಜೆ ನೀಡುವಂತೆ ಕೈಗಾರಿಕೆಗಳು ಮತ್ತು ಕ್ರೆಡಾಯ್ ಸಂಸ್ಥೆಗೆ ಸೂಚಿಸುವುದಾಗಿಯೂ ಅವರು ತಿಳಿಸಿದ್ದರು.

ವಿವಾದದ ಹಿಂದಿನ ರಾಜಕೀಯ: ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಲಕ್ಷಾಂತರ ಬಿಹಾರಿ ಸಮುದಾಯದವರು ನೆಲೆಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ‘ಇಂಡಿ’ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ಗೆ, ಈ ಸಮುದಾಯದ ಮತಗಳು ನಿರ್ಣಾಯಕ. ಕರ್ನಾಟಕದಲ್ಲಿರುವ ಬಿಹಾರಿ ಮತದಾರರನ್ನು ಓಲೈಸುವ ಮೂಲಕ, ಬಿಹಾರದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರಾಜಕೀಯ ತಂತ್ರ ಇದಾಗಿದೆ ಎಂಬುದು ಜೆಡಿಎಸ್‌ನ ಪ್ರಮುಖ ಆರೋಪವಾಗಿದೆ.

ರಾಜ್ಯದ ಸಂಪನ್ಮೂಲವನ್ನು ಪರರಾಜ್ಯದ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವು ರಾಜ್ಯ ಸರ್ಕಾರದ ನಡೆಯನ್ನು ವಿವಾದಕ್ಕೆ ಸಿಲುಕಿಸಿದೆ. ಇದು ಕನ್ನಡಿಗರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಪಕ್ಷಗಳ ರಾಜಕೀಯ ಹಿತಾಸಕ್ತಿಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

LEAVE A REPLY

Please enter your comment!
Please enter your name here