ನವದೆಹಲಿ: ದೇಶದಲ್ಲಿ ಜಾರಿಗೆ ತಂದಿರುವ E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ನೀತಿಯನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು, ಈ ಯೋಜನೆ ಇಲ್ಲದಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಸುಮಾರು ₹125 ತಲುಪುತ್ತಿತ್ತು ಎಂದು ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 135 ಡಾಲರ್ವರೆಗೆ ಏರಿದ ಸಂದರ್ಭದಲ್ಲಿ ಎಥೆನಾಲ್ ಮಿಶ್ರಣದಿಂದಲೇ ಪೆಟ್ರೋಲ್ ದರದ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಆರೋಪಗಳಿಗೆ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಎಂಜಿನ್ಗೆ ಹಾನಿಯಾಗುತ್ತದೆ, ಹಳೆಯ ವಾಹನಗಳು ಬಳಸಲು ಸಾಧ್ಯವಿಲ್ಲ, ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ ಎಂಬಂತಹ ಏಳು ಪ್ರಮುಖ ಆರೋಪಗಳನ್ನು ಸರ್ಕಾರ ತಳ್ಳಿ ಹಾಕಿದೆ. 2023ಕ್ಕೂ ಮುನ್ನ ತಯಾರಾದ ಅನೇಕ ವಾಹನಗಳಲ್ಲಿಯೂ E20 ಬಳಸಬಹುದಾಗಿದ್ದು, ಅದರ ಪರಿಣಾಮ ಅಲ್ಪ ಪ್ರಮಾಣದಲ್ಲಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಮೈಲೇಜ್ ಕುರಿತು ಮಾತನಾಡಿರುವ ಕೇಂದ್ರ ಸರ್ಕಾರ, E20 ಬಳಕೆಯಿಂದ ವಾಹನದ ಮಾದರಿ ಹಾಗೂ ವಯಸ್ಸಿನ ಆಧಾರದ ಮೇಲೆ ಸುಮಾರು 2ರಿಂದ 6 ಶೇಕಡಾವರೆಗೆ ಇಂಧನ ದಕ್ಷತೆ ಕಡಿಮೆಯಾಗಬಹುದು ಎಂದು ಒಪ್ಪಿಕೊಂಡಿದೆ. ಆದರೆ ಇದು ಸಾಮಾನ್ಯ ಚಾಲನೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಹಾಗೂ ಎಂಜಿನ್ ವೈಫಲ್ಯಕ್ಕೆ ಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಸಂಸತ್ತಿನಲ್ಲಿ ಇದೇ ವಿಚಾರವನ್ನು ತಿಳಿಸಿದ್ದರು.
ಸರ್ಕಾರದ ಪ್ರಕಾರ, ಎಥೆನಾಲ್ ಮಿಶ್ರಣ ಕಾರ್ಯಕ್ರಮದಿಂದ ಕಚ್ಚಾ ತೈಲದ ಆಮದು ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಇದರಿಂದ ವಿದೇಶಿ ವಿನಿಮಯ ಉಳಿತಾಯವಾಗುವುದರ ಜೊತೆಗೆ ರೈತರಿಂದ ಉತ್ಪಾದನೆಯಾಗುವ ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಬೇಡಿಕೆ ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೂ ಉತ್ತೇಜನ ದೊರೆಯುತ್ತಿದೆ. ಜೊತೆಗೆ, ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸಿ ಪರಿಸರ ಸಂರಕ್ಷಣೆಯಲ್ಲಿಯೂ ಈ ಯೋಜನೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಇನ್ನೊಂದೆಡೆ, ವಾಹನ ಮಾಲೀಕರ ಕೆಲವು ಸಂಘಟನೆಗಳು E20 ಇಂಧನದಿಂದ ಮೈಲೇಜ್ ಕುಸಿತವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದರೂ, ಇದುವರೆಗೆ E20 ಬಳಕೆಯಿಂದ ನೇರವಾಗಿ ಎಂಜಿನ್ ಹಾನಿಯಾದ ಯಾವುದೇ ದೃಢೀಕೃತ ಪ್ರಕರಣ ದಾಖಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ E20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವನ್ನು ಜಾರಿಗೆ ತರುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದೂ ತಿಳಿಸಲಾಗಿದೆ.



















