ಬಂದ ಚೈತ್ರದ ಹಾದಿ ತೆರೆದಿದೆ / ಬಣ್ಣ-ಬೆಡಗಿನ ಮೋಡಿಗೆ / ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ – ಹೌದು. ಕಾಲ ನಿಲ್ಲುವುದಿಲ್ಲ; ಕಾಲಚಕ್ರವು ಉರುಳುತ್ತಲೇ ಇದೆ, ಉರುಳುತ್ತಲೇ ಇರುತ್ತದೆ, ಉರುಳುತ್ತಲೇ ಇರಬೇಕು. ಕಾಲವು ಬದುಕನ್ನು ಹದಗೊಳಿಸಿ ಮಾಗಿಸುತ್ತದೆ. ಕಾಲಚಕ್ರದ ಜೊತೆಗೆ ಕಾಲವನ್ನು ನವನವೋಲ್ಲಾಸಗೊಳಿಸಲು ಅನೇಕ ಹಬ್ಬಗಳು ಬರುತ್ತವೆ; ಹೋಗುತ್ತವೆ. ಕಾಲಚಕ್ರದಲ್ಲಿ ಎಲ್ಲ ಹಬ್ಬಕ್ಕೂ, ಎಲ್ಲ ಕಾಲಕ್ಕೂ ಒಂದಿಲ್ಲೊಂದು ಮಹತ್ವ ಇದ್ದೇ ಇರುತ್ತದೆ. ಅವು ನೀಡುವ ಉಲ್ಲಾಸ, ಆನಂದ ವರ್ಣನಾತೀತ. ಅಲ್ಲದೆ ಅವು ಇಂದಿನ ಬಿರುಸಿನ, ಓಡುನಡಿಗೆಯ ಜೀವನಕ್ಕೆ ನಾವೀನ್ಯತೆ, ಬಣ್ಣ ತುಂಬಲು ಸಹಕರಿಸುತ್ತವೆ.
ಕವಿ ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಯುಗಾದಿ ಅಂದರೂ ಒಂದೇ / ಯುಗಾಂತ ಅಂದರೂ ಸರಿಯೇ / ಆದಿ ಅಂತ್ಯಗಳೆರಡು ಅವಳಿಜವಳಿ’. ಸೋಲು-ಗೆಲುವು, ನೋವು-ನಲಿವು, ಏಳು-ಬೀಳು, ಆಶೆ-ನಿರಾಶೆಗಳ ಒಮ್ಮೆ ಅಳಿಸಿ ಮತ್ತೆ ನಮ್ಮನ್ನು ನಾವು ಹೊಸ ಬದುಕಿಗೆ ತೆರೆದುಕೊಳ್ಳುವ, ಹೊಸ ಬದುಕಿಗೆ ಅಣಿಯಾಗುವ ಪರ್ವಕಾಲವೇ ಯುಗಾದಿ. ಎಲ್ಲಿಂದ ಹೊರಟಿತೋ ಅದೇ ಜಾಗಕ್ಕೆ ಬಂದು ಅಲ್ಲಿಂದ ಪುನಃ ಪ್ರಾರಂಭಿಸುವುದೇ ಯುಗಾದಿ. ಕಾಲ ಅನಾದಿ; ಅನಂತ. ಆದರೂ ಅನುಕೂಲಕ್ಕಾಗಿ ಅಖಂಡ ಕಾಲವನ್ನು ಅಳೆಯುವ ಪ್ರಯತ್ನ ನಮ್ಮದು. ಯುಗಾದಿಯು ಹಿಂದಿನ ವರುಷವೆಂಬ ಕಾಲಪುರುಷನ ಮರಣ ಹಾಗೂ ಹೊಸ ವರುಷವೆಂಬ ಮಗುವಿನ ಜನನದ ಸೂಚಕ. ಹಳೆಯ-ಹೊಸ ವರುಷಗಳನ್ನು ಬೆಸೆಯುವ ಸೇತುವೆ. ಯುಗಾದಿ ಬರಿಯ ಕಾಲನ ಗಡುವು ಮಾತ್ರವಲ್ಲ; ಬದುಕಿನಲ್ಲಿ ಹೊಸ ಹುರುಪು, ಉತ್ಸಾಹವನ್ನು ಪುಟಿದೇಳಿಸುವ ಕಾಲ. ಕಾಲದಿಂದ ಕಾಲಕ್ಕೆ ನಾವು ಆಚರಿಸುತ್ತಿರುವ ಈ ಹಬ್ಬಗಳಲ್ಲೂ ಅನೇಕ ಬದಲಾವಣೆಗಳು ನಿರೂಪಿತವಾಗುತ್ತಲೇ ಇರುತ್ತವೆ. ಆದರೆ ಹಬ್ಬಗಳು ಮನಸ್ಸಿಗೆ ನೀಡುವ ಮುದ ಅದಮ್ಯ. ಇದೀಗ ಯುಗಾದಿ ಮರಳಿ ಬಂದಿದೆ. ನಮ್ಮ ನಿರೀಕ್ಷೆಗಳೆಲ್ಲ ನನಸಾಗದಿದ್ದರೂ ಹೊಸ ಸಂವತ್ಸರ ಹೊಸ ಹೊಂಗನಸುಗಳೊಂದಿಗೆ ಕಾಲಿಟ್ಟಿದೆ.
ಹಳೆಯದನ್ನು ಮರೆತು ಹೊಸತನ್ನು ಸ್ವಾಗತಿಸುವ, ನಿನ್ನೆಯ ಕಹಿಯನ್ನು ಮರೆತು ಸಿಹಿ ನೆನಪುಗಳೊಂದಿಗೆ ನಾಳೆಯ ಬದುಕಿಗೆ ಸ್ವಾಗತ ಕೋರುವ ಹಬ್ಬವೇ ಯುಗಾದಿ. ಸಂಸ್ಕೃತ ಪದ ಯುಗಾದಿ'ಯ ತದ್ಭವ ರೂಪವೇಉಗಾದಿ’. ಯುಗಾದಿ ಅಂದರೆ ವರ್ಷದ ಆರಂಭ. ಕಾಲಚಕ್ರವು ಒಂದು ಆವೃತ್ತ ಪೂರ್ಣಗೊಳಿಸಿ ಇನ್ನೊಂದಕ್ಕೆ ಕಾಲಿಡುವ, ಹೊಸ ತೇದಿಯೊಂದು ಆರಂಭಗೊಳ್ಳುವ ಪರ್ವಕಾಲ. ಇದು ಕಾಲಕ್ಕೆ ಸಂಬಂಧಿಸಿದ ಪ್ರಮುಖ ಹಬ್ಬ. ಬದುಕಿನಲ್ಲಿ ಹೊಸತನ ಅಳವಡಿಸಿಕೊಳ್ಳಲು ಪ್ರೇರೇಪಿಸುವ ಕಾಲ. ಹೊಸತನವನ್ನು ನಿರೀಕ್ಷಿಸುವುದು, ಆಚರಿಸುವುದು ನಮ್ಮ ಬದುಕಿನ ನಿತ್ಯ ಮಂತ್ರ. ಹಳೆಯ ಪೊರೆಯನ್ನು ಕಳಚಿ, ಹೊಸ ಭಾವಜಲದಲ್ಲಿ ಮಿಂದು ನಾಳೆಗಾಗಿ ಹಂಬಲಿಸುವುದು ಮಾನವಸಹಜ ಧರ್ಮ. ಈ ಸಂದರ್ಭದಲ್ಲಿ ನಿಸರ್ಗವೂ ಹಳೆಯದನ್ನೆಲ್ಲ ಹಿಂದೆ ಹಾಕಿ ಹೊಸತನವನ್ನು ತುಂಬಿಕೊಂಡಿರುತ್ತದೆ.
ಯುಗಾದಿಯನ್ನು ಸೌರಮಾನ ಹಾಗೂ ಚಾಂದ್ರಮಾನವೆಂದು ಆಚರಿಸಲಾಗುತ್ತದೆ. ಮಾನ ಎಂದರೆ ಅಳತೆ. ಚಂದ್ರನ ಚಲನೆಯನ್ನು ಆಧರಿಸಿ ಕಾಲಗಣನೆ ಮಾಡುವ ಪದ್ಧತಿ ಚಾಂದ್ರಮಾನ ಯುಗಾದಿಯೆಂದೂ, ಸೂರ್ಯನ ಚಲನೆಯನ್ನು ಆಧರಿಸಿ ಲೆಕ್ಕ ಹಾಕುವುದನ್ನು ಸೌರಮಾನ ಯುಗಾದಿಯೆಂದೂ ಕರೆಯುತ್ತಾರೆ. ಈ ಎರಡರ ನಡುವೆ ಆರರಿಂದ ಹದಿನೈದು ದಿನಗಳ ಅಂತರವಿರುತ್ತದೆ. ಮೊದಲು ಸೌರಮಾನ ಯುಗಾದಿ ಬಂದರೆ ಅನಂತರ ಚಾಂದ್ರಮಾನ ಯುಗಾದಿಯು ಬರುತ್ತದೆ. ಸೌರಮಾನ ಯುಗಾದಿಯನ್ನು ಆಚರಿಸುವವರು ವಿರಳ.
ಕರ್ನಾಟಕದಲ್ಲಿ ಜನ ಹೊಸ ವರ್ಷವಾದ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಅಂದು ಉಷಃಕಾಲದಲ್ಲಿ ಎದ್ದು ದೇವರ ಸ್ಮರಣೆ ಮಾಡಿ, ದೇವರಕೋಣೆ ಮತ್ತು ಮನೆಯ ಮುಖ್ಯ ದ್ವಾರಗಳಲ್ಲಿ ರಂಗವಲ್ಲಿ, ತೋರಣಾದಿಗಳಿಂದ ಸಿಂಗರಿಸಿ, ಅಭ್ಯಂಜನ ಮಾಡಿ, ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಗಣಪತಿ ಪೂಜೆ ಮಾಡಿ ಕುಲದೇವರನ್ನು ಅರ್ಚಿಸಿ, ಬೇವು ಬೆಲ್ಲ ಸೇವಿಸಿ, ದಿನಶುದ್ಧಿಗಳನ್ನು ತಿಳಿಸುವ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಪವಿತ್ರ ಅಂಗಗಳಿಂದ ಕೂಡಿದ ಪಂಚಾಂಗ ಶ್ರವಣ ಮಾಡುತ್ತಾರೆ. ಹೊಸ ಬಟ್ಟೆ ತೊಟ್ಟು ಹಿರಿಯರಿಗೆ ನಮಿಸುತ್ತಾರೆ.
ಯುಗಾದಿಯಂದು ಸವಿಯುವ ಬೇವು – ಬೆಲ್ಲ ಬದುಕಿನ ಸಿಹಿ – ಕಹಿಗಳ ಜೊತೆಗೆ, ಭೂತದ ಮಧುರ ನೆನಪುಗಳೊಂದಿಗೆ ಭವಿಷ್ಯದ ಹೊಂಗನಸುಗಳ ಕನವರಿಸುವ, ಬದುಕಿನಲ್ಲಿ ಏನೇ ಬಂದರೂ ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಮನೋದಾರ್ಢ್ಯ ನಮ್ಮದಾಗಲಿ ಎಂಬುದರ ಸಂಕೇತವಾಗಿದೆ.
ಆಯುರ್ವೇದದ ಪ್ರಕಾರ ಬೇವು ರೋಗ ನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ. ಬೇವು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ. ಬೆಲ್ಲ ಉಷ್ಣಕಾರಕ ಹಾಗೂ ಜೀರ್ಣಕಾರಕ. ನಮ್ಮ ಹಿರಿಯರು ಬೇವು-ಬೆಲ್ಲದ ಮಹತ್ತ್ವವನ್ನು ಅರಿತಿದ್ದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕೆ ಅನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಹಕ್ಕಿಗಳ ಕಲರವ ಮತ್ತು ಹಸಿರು ತೋರಣ ಯುಗಾದಿಯ ಬಾಹ್ಯ ರೂಪಗಳಾದರೆ, ಸುಖ-ದುಃಖಗಳೆರಡನ್ನೂ ಸಮಾನವಾಗಿ ಕಾಣಬೇಕೆಂಬ ಜೀವನತತ್ತ್ವದ ಬೇವು-ಬೆಲ್ಲ ನಿತ್ಯ ಬದುಕಿನ ಸತ್ಯವಾಗಿ, ಜೀವನೋತ್ಸಾಹವಾಗಿ ಯುಗಾದಿಯ ಆಚರಣೆಯನ್ನು ಅರ್ಥಪೂರ್ಣವಾಗಿಸುತ್ತದೆ. ಮಾವಿನ, ಬೇವಿನ ಎಲೆಗಳನ್ನು ಪೋಣಿಸಿ ಮನೆಯ ಬಾಗಿಲಿಗೆ ತೋರಣ ಕಟ್ಟುವುದು ಕಣ್ಣಿಗೆ ಕಾಣುವ ಸಂಸ್ಕೃತಿಯಾದರೆ, ಬೇವು-ಬೆಲ್ಲ ಜೊತೆಯಾಗಿ ಸೇವಿಸುವುದು ಸುಖದಂತೆ ದುಃಖವನ್ನೂ ಸಮನಾಗಿ ಸ್ವೀಕರಿಸುವ ಮನದ ಸಂಸ್ಕೃತಿ. ಹೇಗೆ ಸಿಹಿ-ಕಹಿಗಳ ಮಿಶ್ರಣ ದೇಹವನ್ನು ಸದೃಢಗೊಳಿಸುವುದೋ, ಹಾಗೆ ಜೀವನದಲ್ಲಿ ಬರುವ ಕಷ್ಟಸುಖಗಳು ಮನವನ್ನು ಬಲಾಢ್ಯಗೊಳಿಸುತ್ತವೆ.
ಬದುಕಿನ ಶೈಲಿಯೇ ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಬ್ಬಹರಿದಿನಗಳ ಆಚರಣೆಗಳೂ ತಮ್ಮ ಅಂತಃಸತ್ತ್ವವನ್ನು ಕಳೆದುಕೊಳ್ಳುತ್ತಿವೆ. ಎಲ್ಲವೂ ಒಮ್ಮೆ ಭರಾಟೆಯಿಂದ ಆಚರಣೆಗೊಂಡು ಮಾಯವಾಗಿಹೋಗುತ್ತವೆ. ಆದರೆ ಬದುಕಿನ ಪಯಣದ ಅರಿವು ನೀಡುವ ಯುಗಾದಿ ಇದೀಗ ಮರಳಿ ಬಂದಿದೆ. ಹೊಸತನ, ಹೊಸ ಉಲ್ಲಾಸವನ್ನು ಮತ್ತೊಮ್ಮೆ ನಮ್ಮೆಲ್ಲರ ಮನದಲ್ಲಿ ತಂದಿದೆ. ನವನವೀನ ಭಾವಗಳು, ಭರವಸೆಯ ಬೆಳಕಿನೊಂದಿಗೆ ಬಾಳ ಪಯಣಕೆ ಹೊಸ ಪಥವನ್ನು ತೆರೆದಿದೆ. ಹೊಸತನವನ್ನು ನಿರೀಕ್ಷಿಸುವುದು, ಮನದುಂಬಿ ಸ್ವಾಗತಿಸುವುದು ಚಲನಶೀಲ ಬದುಕಿನ ಸತ್ಯ. ಹಳತು ಕಳೆದು ಹೊಸತಿಗೆ ತೆರೆದುಕೊಳ್ಳುವ ಬದುಕ ಪ್ರೀತಿಸಲು ಕಲಿಸುವ ಈ ಪರ್ವಕಾಲ ನಮಗೆ ಸಂತಸವನ್ನು ನೀಡುತ್ತದೆ. ಹಬ್ಬ ಎಂದರೆ ಸಂಭ್ರಮ, ಹೊಸತನದ ನಿರೀಕ್ಷೆ. ಪ್ರಕೃತಿಯಲ್ಲಿ ಪಲ್ಲವಿಸಿದ ಹೊಸ ಚಿಗುರು, ಉತ್ಸಾಹ ಮೈ-ಮನಗಳ ತಲುಪುವ ಹೊತ್ತು.
ಇಂದಿನ ಯಾಂತ್ರಿಕ ಬದುಕಿನಲ್ಲಿ ಹಬ್ಬಗಳು ಹಿಂದಿನ ಉತ್ಸಾಹ ಮೂಡಿಸದಿದ್ದರೂ ಬದುಕಿನ ಏಕತಾನತೆಯನ್ನು ಮುರಿಯಲು, ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಜೀವಂತವಾಗಿ ಮುಂದಿನ ಪೀಳಿಗೆಗೆ ರವಾನಿಸಲು ಅವುಗಳನ್ನು ಆಚರಿಸಲೇಬೇಕು. ಈ ಸಂದರ್ಭ ನೆಲಮುಗಿಲ ಪ್ರೀತಿಯಿಂದ ಪಲ್ಲವಿಸಿದ ಪ್ರಕೃತಿಯಲ್ಲಿ ಹೂಹಣ್ಣು ತರುಲತೆಗಳ ಕಂಪಿನಲಿ ತೊನಲಾಡುತ ಪ್ರಕೃತಿ ತನ್ನ ತಾ ಮರೆತಿರುವಾಗ ಸಹಜವಾಗಿಯೇ ಮನಸು ಆನಂದದಲಿ ಮುಳುಗಿರುತ್ತದೆ. ಆಗ ಹಬ್ಬದ ಆಚರಣೆಯು ಆ ಸೊಬಗಿಗೆ ಮಗದಷ್ಟು ಸೊಗಸನ್ನು ತುಂಬುತ್ತದೆ.
ಪ್ರಕೃತಿ ನಮಗೆ ನೀಡಿದ ಅದ್ಭುತ ಕೊಡುಗೆ ಯುಗಾದಿ. ಗಿಡ, ಮರ, ಬಳ್ಳಿಗಳೆಲ್ಲ ಚಿಗುರೆಲೆಗಳನ್ನು ಹೊದ್ದು ಚಿನ್ನಾಟವಾಡುವುದರ ಮೂಲಕ ಮನುಕುಲಕ್ಕೆ ಸಂತಸದ ಹೊನಲನ್ನು ಹರಿಸುವ ಸುಸಮಯ. ಕಷ್ಟ-ಸುಖದ ದ್ಯೋತಕವಾಗಿ ನಮ್ಮ ಹಿರಿಯರು ಆಚರಣೆಗೆ ತಂದ ಈ ದಿನ ಕಷ್ಟವೇ ಬರಲಿ ಸುಖವೇ ಇರಲಿ ಮನಃಸ್ಥಿತಿ ಎಂದಿಗೂ ಬದಲಾಗದಿರಲಿ; ನೋವು-ನಲಿವುಗಳು ಮೇಳೈಸಿದ ಬದುಕು ದಾರಿಯಲಿ ಸಮನ್ವಯತೆ ಸಾರುವ ಈ ದಿನ ಬೇವು-ಬೆಲ್ಲ ತಿಂದು ಎರಡನ್ನೂ ಸಮಚಿತ್ತದಿಂದ ಸದ್ಭಾವದಿಂದ ಸ್ವೀಕರಿಸುವ ಮನೋಭಾವ ಮನದಿ ಹೊಮ್ಮಲಿ.
– ಡಾ. ಮೈತ್ರಿ ಭಟ್ ವಿಟ್ಲ
(ಲೇಖಕರು ವೈದ್ಯರು, ಹವ್ಯಾಸಿ ಬರಹಗಾರರು)























