ಕಲಬುರಗಿ: ಬಿಜೆಪಿಯವರು ಸುಮ್ಮನೆ ನಮ್ಮ ಸರಕಾರ ಪಾಪರ್ ಆಗಿದೆ, ದಿವಾಳಿ ಅಗಿದೆ ಎನ್ನುತ್ತಿದ್ದಾರೆ. ದಾಖಲೆ ತೆಗೆದುಕೊಂಡು ಬನ್ನಿ ಚರ್ಚೆ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸೋಮವಾರ ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಕ್ಷೇತ್ರಕ್ಕೂ ಯೋಜನೆಯ ಹಣ ಹೋಗುತ್ತೆ. ಅದು ಬಿಟ್ಟು ದಿವಾಳಿ, ದಿವಾಳಿ ಅಂದರೆ ಹೇಗೆ? ದಿವಾಳಿಯಾಗಿರೋದು ಬಿಜೆಪಿ ಪಕ್ಷ. ಅವರ ನಾಯಕತ್ವದಲ್ಲಿ ಬಿಜೆಪಿ ಉದ್ದಾರ ಆಗೋದಿಲ್ಲ. ಸಾಲ ಮಾಡಿ ತುಪ್ಪ ತಿಂದೋರು ಅವರು. ನಮ್ಮ ಕಲ್ಯಾಣ ಪಥ ರಸ್ತೆ ಯೋಜನೆಯ ಅಡಿಗಲ್ಲು ಆದ ಮೇಲೆ 5 ಸಾವಿರ ಕೋಟಿ ರೂ. ಗಳ ಪ್ರಗತಿ ಪಥ ಯೋಜನೆಯ ಚಾಲನೆಗೆ ಮುಂದಿನ ವಾರ ವಿಜಯೇಂದ್ರ ಅವರಿಗೆ ನಾನೇ ಆಹ್ವಾನ ಮಾಡುತ್ತೇನೆ ಎಂದರು.
ನಮ್ಮ ಕಂಡಕ್ಟರ್ ಮೇಲೆ ಮಹಾರಾಷ್ಟ್ರದವರು ಹಲ್ಲೆ ಮಾಡಿದ್ದು ತಪ್ಪು. ನಾನು ಅದನ್ನು ಖಂಡಿಸುತ್ತೇನೆ. ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್ ಇಂಜಿನ್ ಸರ್ಕಾರ ಅಲ್ವಾ ಸಮಸ್ಯೆ ಬಗೆಹರಿಸಲಿ. ನಾನು ನಮ್ಮ ನೆಲ, ಜಲ, ಗಡಿ ವಿಷಯದಲ್ಲಿ ಬದ್ಧರಾಗಿದ್ದೇವೆ ಎಂದು ಹೇಳಿದರು.
ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಕ್ಕೆ ಬಿಜೆಪಿಯ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಮೊದಲು ಹೇಳಲಿ. ಬಿಜೆಪಿಯವರು ಯಾವುದಾದ್ರು ಒಳ್ಳೆ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದಾರಾ? ಪ್ರತಾಪ್ ಸಿಂಹ ಮೇಲೆ ಯಾಕೆ ಕೇಸ್ ಆಗಿದೆ ಎಂದರು.
ನನ್ನ ಅವರ ಮಧ್ಯೆ ಯಾವ ಒಳ ಒಪ್ಪಂದವೂ ಇಲ್ಲ. ಇದ್ದರೆ ಅದನ್ನು ಬಹಿರಂಗಪಡಿಸಿ, ಬಿಜೆಪಿಯವರು ನನ್ನ ರಾಜಿನಾಮೆ ಎಷ್ಟು ಬಾರಿ ಕೇಳಿದ್ದಾರೆ?. ಅವರ ಬಗ್ಗೆ ಅತೀ ಹೆಚ್ಚು ಮಾತನಾಡೋದೆ ನಾನು ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಬಗ್ಗೆ ಮಾತನಾಡೋಕೆ ಹೇಸಿಗೆ ಬರುತ್ತೆ ಎಂದು ಹೇಳುವ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಮಾತನಾಡಿ ಅಂತ ನಾವು ಹೇಳಿದ್ದಿವಾ? ಅಥವಾ ಪ್ರಬಂಧ ಬರೆದುಕೊಡಿ ಎಂದು ಕೇಳಿದ್ದಿವಾ ಎಂದು ಎಚ್ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ ಆದರು.