ಕಲಬುರಗಿ: ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ಐವರು ಯುವಕರನ್ನು ನಗರದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಆಜಾದಪುರ ಉಮರ್ ಕಾಲೊನಿಯ ಗುಲಾಮ್ ನಬಿ ಅಲಿಯಾಸ್ ಬಿಲಾಲ್(೨೧), ಮಹ್ಮದ್ ಪರ್ವೆಜ್ ಗುಂಡು(೨೭), ಸೈಯದ್ ಖದೀರ್(೨೪), ಶೇಖ್ ಶೋಯೆಬ್(೨೨) ಹಾಗೂ ಗರೀಬ್ ನವಾಜ್ ಕಾಲೊನಿಯ ಅಸ್ಲಮ್ ಪಟೇಲ್(೨೪) ಬಂಧಿತ ಯುವಕರು.
ಪಿಸ್ತೂಲು ಹಾಗೂ ತಲವಾರು ಹಿಡಿದು ಈ ಯುವಕರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ತಮ್ಮ ಬಗ್ಗೆ ಸುತ್ತಲಿನ ಎಲ್ಲರೂ ಭೀತಿಗೊಳ್ಳುವಂತೆ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರು ತಕ್ಷಣ ಎಲ್ಲ ಐವರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಪಿಸ್ತೂಲು ತರಹದ ಪಿಸ್ತೂಲ್, ತಲವಾರು ಮತ್ತು ಚಾಕು ಸೇರಿದಂತೆ ಇತರ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.