ಯೋಜನೆ ಅನುಷ್ಠಾನದಲ್ಲಿ ತೀರಾ ಹಿಂದುಳಿದಿದ್ದೀರಿ
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಕಾರಣಕ್ಕೇ ಪಿಎಂ ಕುಸುಮ್ ಅಳವಡಿಕೆ ಮುಂದೂಡುತ್ತಲೇ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರೈತರ ಬಗ್ಗೆ ಏಕಿಷ್ಟು ತಾತ್ಸಾರ? ಕೇಂದ್ರ ಸರ್ಕಾರ ರೈತರ ಸಬಲೀಕರಣಕ್ಕಾಗಿ “ಕುಸುಮ್ ಬಿ” ಸೌರ ಶಕ್ತಿ ಯೋಜನೆ ಕಲ್ಪಿಸಿದರೆ ಅದರ ಅನುಷ್ಠಾನದಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ.
ತಮ್ಮ ಸರ್ಕಾರಕ್ಕೆ ರೈತಪರ ಕಾಳಜಿಯಂತೂ ಮೊದಲೇ ಇಲ್ಲ. ಇನ್ನು, ಆರ್ಥಿಕ ವೆಚ್ಚ ಮತ್ತು ಇಂಧನ ಉಳಿತಾಯದ ಯೋಜನೆಗಳೂ ಬೇಡವೇ? ಪದೇಪದೆ ಕರ್ನಾಟಕಕ್ಕೆ ಮೋದಿ ಸರ್ಕಾರ ಏನೂ ಕೊಟ್ಟಿಲ್ಲ, ಅವರ ಕೊಡುಗೆ ಏನೂ ಇಲ್ಲ ಅಂತೀರಾ, ಈಗೇನು ಹೇಳುತ್ತೀರಿ?
ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಂತೆ ನನ್ನ ನವೀಕರಿಸಬಹುದಾದ ಇಂಧನ ಇಲಾಖೆಯಿಂದಲೇ ಕುಸುಮ್ ಬಿ. ಯೋಜನೆಯಡಿ 40,000 ಕೃಷಿ ಪಂಪ್ ಸೆಟ್ ಗಳ ಸೌರೀಕರಣಕ್ಕೆ ಮಂಜೂರಾತಿ ನೀಡಿದ್ದೇನೆ. ಆದರೆ, ಇದರಲ್ಲಿ ತಾವು ಮಾಡಿದ್ದೇನು?
ಕುಸುಮ್ ಬಿ ಅನುಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ಆರ್ಥಿಕ ಹೊರೆ ಜತೆಗೆ 3000 ಮೆಗಾವ್ಯಾಟ್ ವಿದ್ಯುತ್ ಉಳಿತಾಯವೂ ಆಗುತ್ತದೆ. ಹಾಗಿದ್ದರೂ ಯೋಜನೆ ಅನುಷ್ಠಾನದಲ್ಲಿ ತೀರಾ ಹಿಂದುಳಿದಿದ್ದೀರಿ. ಕಾರಣ ಆರ್ಥಿಕ ಕೊರತೆ ಅಲ್ಲದೇ ಮತ್ತೇನು!?
ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಕಾರಣಕ್ಕೇ ಪಿಎಂ ಕುಸುಮ್ ಅಳವಡಿಕೆ ಮುಂದೂಡುತ್ತಲೇ ಬಂದಿದೆ ತಮ್ಮ ಸರ್ಕಾರ. ಮುಖ್ಯಮಂತ್ರಿಗಳೇ ಅಭಿವೃದ್ಧಿ ಪರ, ಅನ್ನದಾತರ ಪರ ಯೋಜನೆಗಳಿಗೆ ಈ ಮಟ್ಟದ ಅನಾದಾರ ತೋರುವುದು ಸರಿಯಲ್ಲ ಎಂದಿದ್ದಾರೆ.