ಪಕ್ಷಾಂತರದ ಅವಶ್ಯಕತೆ ನಮಗಿಲ್ಲ

0
118

ಕಲಾದಗಿ(ಬಾಗಲಕೋಟೆ): `ಪಕ್ಷಾಂತರದ ಅವಶ್ಯಕತೆ ನಮಗಿಲ್ಲ, ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಯಾವುದೇ ಅಧಿಕಾರವನ್ನು ಬಯಸದೆ ಅವರಾಗೇ ಅವರು ಬಂದರೆ ಬೇಡ ಅನ್ನೊಲ್ಲ ಎಂದು ಸಾರಿಗೆ ಹಾಗೂ ಮುಜುರಾಯಿ ಇಲಾಖೆಗಳ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಸಮೀಪ ಚಿಕ್ಕಶಂಶಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲಿಸೋದು ಬೇಡ. ಸಿದ್ದರಾಮಯ್ಯನವರು ರಾಜ್ಯ ಸಿಎಂ; ಅವರು ಬರೀ ಕಾಂಗ್ರೆಸ್‌ನ ಸಿಎಂ ಅಲ್ಲ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಾವು ಸಹ ಅವರನ್ನು ಭೇಟಿ ಆಗಿದ್ದೇವೆ. ಹೀಗಾಗಿ ಶಾಸಕರು ಸಿಎಂ ಭೇಟಿ ಆಗೋದ್ರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.
ಎಂಪಿ ಎಲೆಕ್ಷನ್ ಆದಮೇಲೂ ನಮ್ಮ ಶಾಸಕರು ನಮ್ಮಲ್ಲಿಯೇ ಇರುತ್ತಾರೆ. ನಮ್ಮದು ಪೂರ್ಣಾವಧಿಯ ಸರ್ಕಾರ. ಮೊನ್ನೆಯ ಚುನಾವಣೆಯಲ್ಲಿ ನಮಗೆ ಬಿಜೆಪಿಗಿಂತ ೭ ಪರ್ಸೆಂಟ್ ವೋಟ್ ಹೆಚ್ಚು ಬಂದಿದೆ. ನಾಯಕರಿಲ್ಲದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಡೌನ್ ಆಗುತ್ತದೆ, ಈಶ್ವರಪ್ಪನವರ ಮಾತನ್ನು ಸಿರಿಯಸ್ಸಾಗಿ ತಗೋಬಾರದು ಎಂದು ಟಾಂಗ್ ನೀಡಿದರು.
ಸಾಲ ಮಾಡೋದ್ರಲ್ಲೂ ಬಿಜೆಪಿ ಎಕ್ಸ್‌ಪರ್ಟ್: ಕಳೆದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಐದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ೨೬ ಸಾವಿರ ಕೋಟಿ ಬಾಕಿ ಬಿಲ್ ಇಟ್ಟು ಹೋಗಿದ್ದಾರೆ. ಮೋದಿಯವರು ತಮ್ಮ ಅಧಿಕಾರದ ೯ ವರ್ಷದಲ್ಲಿ ೧೨೦ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ಮಾಡೋದ್ರಲ್ಲಿ ಎಕ್ಸ್ಪರ್ಟ್ ಆಗಿರುವ ಬಿಜೆಪಿಯವರು ಸುಮ್ಮನೆ ನೀತಿ ಮಾತಾಡ್ತಾರೆ ಎಂದು ಸಾಲದ ಲೆಕ್ಕಾಚಾರ ಬಿಡಿಸಿಟ್ಟರು.