ಪಣಜಿ: ಗೋವಾದ ದೂಧಸಾಗರ ಜಲಪಾತವು ರಾಜ್ಯದಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತ ವೀಕ್ಷಣೆಗೆ ಮಳೆಗಾಲದಲ್ಲಿ ಹೇರಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದು, ಪ್ರವಾಸಿಗರು ದೂಧಸಾಗರ ಜಲಪಾತ ವೀಕ್ಷಣೆಗೆ ಅವಕಾಶ ಲಭಿಸಿದಂತಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ದೂಧಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಿದ್ದರು. ಪ್ರವಾಸಿಗರಿಗೆ ಮಾಹಿತಿ ನೀಡಲು ಸುತ್ತೋಲೆ ಹೊರಡಿಸಲಾಗಿತ್ತು. ಕೆಲ ತಿಂಗಳ ನಿರ್ಬಂಧದ ನಂತರ ಇದೀಗ ದೂಧಸಾಗರ ಪ್ರವಾಸೋದ್ಯಮ ಪುನರಾರಂಭಗೊಂಡಿದೆ.
ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಈ ವರ್ಷ ಗೋವಾದಲ್ಲಿ ವಿವಿಧ ಜಲಪಾತಗಳಲ್ಲಿ ಸಂಭವಿಸಿದ ವಿವಿಧ ಅಪಘಾತಗಳಲ್ಲಿ ಹಲವಾರು ಪ್ರವಾಸಿಗರು ಮತ್ತು ಸ್ಥಳೀಯರು ಪ್ರಾಣ ಕಳೆದುಕೊಂಡ ನಂತರ ರಾಜ್ಯದ ಅರಣ್ಯ ಪ್ರದೇಶದಲ್ಲಿನ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಮೂರು ತಿಂಗಳ ಕಾಯುವಿಕೆಯ ನಂತರ ಇದೀಗ ದೂಧಸಾಗರ ಜಲಪಾತ ವೀಕ್ಷಣೆಗೆ ಅವಕಾಶ ನೀಡಲಾಗಿದೆ.