ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

0
19

ಚಿಕ್ಕಮಗಳೂರು: ಆಕಸ್ಮಿಕವಾಗಿ ಕೆರೆಯ ನೀರಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಂಟಿನಮಡು ಗ್ರಾಮದಲ್ಲಿ ಭಾನುವಾರ ನಡೆದಿದೆ. ಯಶವಂತ(10), ರೋಹಿತ್ (6) ಮೃತಪಟ್ಟ ಬಾಲಕರು.
ಕುಂಟಿನಮಡು ಗ್ರಾಮ ಸಮೀಪದ ಕೆರೆ ಬಳಿ ಹೋಗಿದ್ದ ಬಾಲಕರು ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಶಶಿಧರ ಮತ್ತು ಪುಷ್ಪಾ ದಂಪತಿಯ ಪುತ್ರ ಯಶವಂತ, ಶಶಿಧರ ಅವರ ಸಹೋದರ ಹರೀಶ್ ಮತ್ತು ಸೌಮ್ಯ ದಂಪತಿಯ ಮಗ ರೋಹಿತ್.
ತಂದೆ ಶಶಿಧರ್ ಅವರು ಎಂದಿನಂತೆ ತೋಟಕ್ಕೆ ತೆರಳಿದ್ದರು. ಈ ವೇಳೆ ಅವರನ್ನೇ ಹಿಂಬಾಲಿಸಿಕೊಂಡು ಐದನೇ ತರಗತಿ ಓದುತ್ತಿದ್ದ ಯಶವಂತ್ ಹಾಗೂ ಈ ವರ್ಷ ಒಂದನೇ ತರಗತಿಗೆ ದಾಖಲಾತಿ ಪಡೆಯಬೇಕಿದ್ದ ರೋಹಿತ್ ಸೈಕಲ್‌ನಲ್ಲಿ ಸಾಗಿದ್ದಾರೆ. ಆದರೆ ಊರಿನ ಹೊರಭಾಗದ ಕೆರೆಯಲ್ಲಿ ಮಕ್ಕಳು ಆಕಸ್ಮಿಕವಾಗಿ ಮುಳುಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಮಕ್ಕಳನ್ನು ನೋಡಿದ ಸ್ಥಳೀಯರೊಬ್ಬರು ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿ ನೀರಿಗೆ ಧುಮುಕಿ ರಕ್ಷಿಸುವ ಪ್ರಯತ್ನ ಮಾಡಿದರು.
ಇಬ್ಬರು ಮಕ್ಕಳನ್ನು ಕೆರೆಯಿಂದ ಹೊರ ತೆಗೆಯುವಾಗ ರೋಹಿತ್‌ನ ಉಸಿರು ಅದಾಗಲೇ ನಿಂತಿತ್ತು. ಜೀವಂಶವಾಗಿದ್ದ ಯಶವಂತ್‌ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಆತನೂ ಮೃತಪಟ್ಟಿದ್ದಾನೆ.
ಭಾನುವಾರ ಬೆಳಗ್ಗೆಯೇ ಮನೆಯಲ್ಲಿ ಯಶವಂತ್ ಹಾಗೂ ರೋಹಿತ್ ಮೀನು ಸಾಕುವ ಬಗ್ಗೆ ಮಾತನಾಡಿದ್ದರು. ಮೀನನ್ನು ಹಿಡಿದು ತಂದು ಮನೆಯಲ್ಲಿ ಸಾಕುವ ಬಗ್ಗೆ ಮಾತನಾಡಿಕೊಂಡು ತಂದೆಯನ್ನು ಹಿಂಬಾಲಿಸಿಕೊಂಡು ಸೈಕಲ್‌ನಲ್ಲಿ ಕೆರೆಗೆ ತೆರಳಿ ಮೀನು ಹಿಡಿದು ತರುವ ಪ್ರಯತ್ನ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ನಾಲ್ಕು ತಿಂಗಳ ಹಿಂದೆ ರೋಹಿತ್ ತಮ್ಮ ಒಂದೂವರೆ ವರ್ಷದ ಭುವನ್ ಹೊಸದುರ್ಗ ತಾಲ್ಲೂಕಿನ ದೊಡೇನಪಾಳ್ಯದಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ, ಆದಾಗಿ ಕೆಲವೇ ದಿನಗಳ ಅಂತರದಲ್ಲಿ ಮತ್ತಿಬ್ಬರು ಮಕ್ಕಳು ಮೃತಪಟ್ಟಿದ್ದರಿಂದ ಕುಟುಂಬದವರ ಆಘಾತಕ್ಕೆ ಒಳಗಾಗಿದ್ದಾರೆ, ಮಕ್ಕಳ ಮೃತದೇಹ ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Previous articleಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಸಿಎಂ ಸಿದ್ದರಾಮಯ್ಯ ಸಭೆ
Next articleಚಿನ್ನದಾಸೆಗೆ ವೃದ್ಧೆಯ ಭೀಕರ ಹತ್ಯೆ