ಹುಬ್ಬಳ್ಳಿ: ಈಗಿನ ಕಾಂಗ್ರೆಸ್ಗೂ, ಮಹಾತ್ಮ ಗಾಂಧೀಜಿಯವರಿಗೂ ಏನು ಸಂಬಂಧ? ಈಗಿನದು ನಕಲಿ ಕಾಂಗ್ರೆಸ್ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಶತಮಾನೋತ್ಸವದ ಕುರಿತು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಳೇ ಕಾಂಗ್ರೆಸ್ ತುಂಡು ತುಂಡಾಗಿ ಹೋಗಿದೆ. ಕಾಂಗ್ರೆಸ್ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು. ಅದು ಕಳ್ಳಕಾಕರ ಗುಂಪು. ಇವರ್ಯಾರು ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ನ ವಾರಸುದಾರರಲ್ಲ. ನಕಲಿ ಕಾಂಗ್ರೆಸ್ಗೆ ಸರ್ಕಾರಿ ದುಡ್ಡು ಯಾಕೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕಾರಿನಲ್ಲಿ ಸುತ್ತಾಡಿಸಿದ್ದು ತನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡುತ್ತಾರೆ. ಅಂದರೆ, ಗೃಹ ಸಚಿವರನ್ನೇ ಕತ್ತಲಲ್ಲಿ ಇಟ್ಟು ಪೊಲೀಸರು ಹೀಗೆ ಮಾಡಿದ್ದಾರಾ? ಜಿಲ್ಲಾ ಉಸ್ತುವಾರಿ ಸಚಿವರು ಸಹ ಪೊಲೀಸರು ತಪ್ಪು ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಇದರ ಹಿಂದಿನ ಸೂತ್ರಧಾರರು ಯಾರು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.


























