ಅಳ್ಳೋಳ್ಳಿ ಪಿಡಿಒ ಅಮಾನತು

ಅಮಾನತು

ಚಿತ್ತಾಪುರ(ಕಲಬುರಗಿ): ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ ಕಂಡುಬಂದಿರುವ ಪ್ರಯುಕ್ತ ಅಳ್ಳೋಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಆದೇಶಿಸಿದ್ದಾರೆ.
ಮಾಹಿತಿ ಹಕ್ಕು ಅಧಿನಿಯಮದಡಿ ಸಂಯುಕ್ತ ಕರ್ನಾಟಕ ಬಿಡಿ ವರದಿಗಾರ ನಾಗಯ್ಯಸ್ವಾಮಿ ಅಲ್ಲೂರ(ಈಗ ಸದ್ಯ ಕಲಬುರಗಿ ಜಿಮ್ಸ್ನಲ್ಲಿ ಕೋಮಾದಲ್ಲಿದ್ದಾರೆ) ಅರ್ಜಿ ಸಲ್ಲಿಸಿ ಮಾಹಿತಿ ಕೇಳಿರುವ ಪ್ರಯುಕ್ತ ಪಿಡಿಒ ಕರೆ ಮಾಡಿ, ಬ್ಲಾಕಮೇಲ್ ಮಾಡಲು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ ಒಳಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ನನಗೆ ಬಿಪಿ ಇದೆ ತುಂಬಾ ಭಯಗೊಂಡಿರುವೆ, ನನ್ನ ಜೀವಕ್ಕೆ ಏನಾದರೂ ಹಾನಿಯಾದರೆ ಪಿಡಿಒ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ಪಿಡಿಒ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಾಗಯ್ಯಸ್ವಾಮಿ ಮನವಿ ಸಲ್ಲಿಸಿದ್ದರು. ತಾಪಂ ಕಾರ್ಯನಿರ್ವಹಾಕಾಧಿಕಾರಿ ಅವರು ಪಿಡಿಒ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ನೋಟಿಸ್‌ಗೆ ಯಾವುದೇ ಉತ್ತರ ನೀಡದ ಪ್ರಯುಕ್ತ ಹಾಗೂ ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿರುವ ಮಾಹಿತಿ ಒದಗಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಪಂ ಸಿಇಒ ಅವರು ದೇವಿಂದ್ರಪ್ಪ ಭಾಲ್ಕಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪಿಡಿಒ ಅವರ ಮೂಲ ಕಾರ್ಯಸ್ಥಾನ ಮೊಗಲಾ ಗ್ರಾಪಂ, ಆದರೆ ಅವರನ್ನು ಅಳ್ಳೋಳ್ಳಿ ಗ್ರಾಪಂ ಹಾಗೂ ಕೊಲ್ಲೂರ ಗ್ರಾಪಂ ಪ್ರಭಾರಿ ಪಿಡಿಒ ಸ್ಥಾನಕ್ಕೆ ನಿಯೋಜಿಸಲಾಗಿತ್ತು.