ಬೆಳಗಾವಿ: ವಿಕಲಚೇತನ ವ್ಯಕ್ತಿಯೋರ್ವನಿಗೆ ರಸ್ತೆ ಮಧ್ಯದಲ್ಲಿ ನೆಲಕ್ಕೆ ಬೀಳಿಸಿ ಒಬ್ಬ ಪೊಲೀಸ್ ಲಾಠಿಯಿಂದ ದನಕ್ಕೆ ಬಡಿದಂತೆ ಬಡೆಯುತ್ತಿದ್ದರೆ ಮತ್ತೊಬ್ಬ ಪೊಲೀಸ್ ಕಾಲಿನಿಂದ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ವರ್ತನೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ವಿಕಲಚೇತನ ವ್ಯಕ್ತಿ ನಿರಂಜನ ಚೌಗಲೆ, ನಾನು ಊಟ ತರಲೆಂದು ಹೋಟೆಲ್ಗೆ ಹೋಗಿದ್ದೆ ಈ ವೇಳೆ ಪೊಲೀಸರು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನೇನು ಕಳ್ಳತನ ಮಾಡಲು ಹೋಗಿಲ್ಲ, ಯಾವುದೇ ತಪ್ಪನ್ನೂ ಮಾಡಿಲ್ಲ. ಸುಖಾಸುಮ್ಮನೇ ನನ್ನ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಎಂದಿದ್ದಾರೆ.
ನಾನು ಅಂಗವಿಕಲ ಎಂದರೂ ನೆಲಕ್ಕೆ ಕೆಡವಿ ಬಿಟ್ಟುಬಿಡದೆ ಬೂಟಿನಿಂದ ಒದಿದ್ದಾರೆ. ಬಳಿಕ ಬೈಕ್ ತೆಗೆದುಕೊಂಡು ಹೋಗು ಎಂದಿದ್ದಾರೆ. ಆದರೆ, ನನಗೆ ಸರಿಯಾಗಿ ನಡೆಯಲು ಕೂಡ ಬರದ ರೀತಿಯಲ್ಲಿ ಹೊಡೆದಿದ್ದರು. ಬಳಿಕ ನನ್ನ ಮೊಬೈಲ್, ಬೈಕ್ ಎರಡನ್ನೂ ತೆಗೆದುಕೊಂಡು ಹೋಗಿದ್ದಾರೆ. ನಾನು ಅಲ್ಲಯೇ ಮಲಗಿ ಬೆಳಗ್ಗೆ ಮನೆಗೆ ಹೋಗಿದ್ದೇನೆ. ಬಡವನ ಮೇಲೆ ಮನಸೋಇಚ್ಚೆ ಥಳಿಸಿ ತಮ್ಮ ಪೌರುಷ ತೋರಿಸಿದ್ದಾರೆ ಎಂದು ನಿರಂಜನ ಕಣ್ಣೀರಿಟ್ಟಿದ್ದಾರೆ.