ಬೆಂಗಳೂರು: ಭಾನುವಾರ ರಾತ್ರಿ ಅಪರೂಪದ ಖಗೋಳ ವಿದ್ಯಮಾನವೊಂದು ಸಂಭವಿಸಲಿದೆ. ಸಂಪೂರ್ಣ ಚಂದ್ರಗ್ರಹಣವು ಆಕಾಶದಲ್ಲಿ ಗೋಚರಿಸಲಿದ್ದು, ಚಂದ್ರನು ಗಮನಾರ್ಹವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಈ ವಿದ್ಯಮಾನವನ್ನು ಸಾಮಾನ್ಯವಾಗಿ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.
ಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ, ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ವಕ್ರೀಭವನಗೊಳ್ಳುತ್ತವೆ, ಇದರಿಂದ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ. ನೀಲಿ ತರಂಗಾಂತರಗಳು ಭೂಮಿಯ ಹಗಲು ಆಕಾಶಕ್ಕೆ ಚೆಲ್ಲುತ್ತವೆ. ಇದರಿಂದಾಗಿ ಚಂದ್ರ ರಕ್ತ ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಮಾಹಿತಿ ನೀಡಿದರು.
ಈ ಸಂಪೂರ್ಣ ಚಂದ್ರಗ್ರಹಣವು ಬಣ್ಣ ಮತ್ತು ಸ್ಪಷ್ಟ ವೀಕ್ಷಣೆಯಿಂದ ವಿಶಿಷ್ಟವಾಗಿದೆ. ಆದರೂ, ವೀಕ್ಷಣೆ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಕೊನೆಯ ಸಂಪೂರ್ಣ ಚಂದ್ರಗ್ರಹಣವು 2018 ರಲ್ಲಿ ಸಂಭವಿಸಿತ್ತು. ಮುಂದಿನದು ಡಿಸೆಂಬರ್ 31, 2028 ರಂದು ನಡೆಯಲಿದೆ. ಜಪಾನ್, ಉತ್ತರ ಧ್ರುವ ಮತ್ತು ಯುರೋಪ್ ಪ್ರಾಂತ್ಯಗಳಲ್ಲಿಯೂ ಈ ಗ್ರಹಣ ಗೋಚರಿಸಲಿದೆ. ಖಗೋಳ ಭೌತವಿಜ್ಞಾನಿಗಳ ಪ್ರಕಾರ, ಸಂಪೂರ್ಣ ಚಂದ್ರಗ್ರಹಣವು 1.22 ಗಂಟೆಗಳ ಕಾಲ ಇರುತ್ತದೆ.
ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಎಲ್ಲಿ?: ಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಭೂಮಿಯ ವಾತಾವರಣದಲ್ಲಿರುವ ಧೂಳಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಗ್ರಹಣ ವೀಕ್ಷಣೆ ಆಸಕ್ತರು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯ ಅಥವಾ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬಹುದು ಎಂದು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ವಿಜ್ಞಾನಿ ನಿರುಜ್ ಮೋಹನ್ ರಾಮಾನುಜಮ್ ತಿಳಿಸಿದ್ದಾರೆ.
ಗ್ರಹಣದ ಸಮಯಗಳು
ರಾತ್ರಿ 8:50: ಗ್ರಹಣ ಆರಂಭ
ರಾತ್ರಿ 9:57: ಭಾಗಶಃ
ರಾತ್ರಿ 11:00: ಚಂದ್ರ ಸಂಪೂರ್ಣವಾಗಿ ಮರೆಯಾಗುತ್ತಾನೆ
ರಾತ್ರಿ 11:00 – ಬೆಳಗಿನ ಜಾವ 12:22 ಚಂದ್ರ ರಕ್ತ ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ (ಕೆಂಪು ಚಂದ್ರ)
ಬೆಳಗಿನ ಜಾವ 12:23: ಚಂದ್ರ ಭೂಮಿಯ ನೆರಳಿನಿಂದ ಹೊರಬರಲು ಆರಂಭಿಸುತ್ತಾನೆ
ಬೆಳಗಿನ ಜಾವ 1:26: ಚಂದ್ರ ಸಂಪೂರ್ಣ ನೆರಳಿನಿಂದ ಹೊರಬರುತ್ತಾನೆ
ಬೆಳಗಿನ ಜಾವ 2:25: ಗ್ರಹಣ ಕೊನೆಗೊಳ್ಳುತ್ತದೆ.