ರಾಜ್ಯದಲ್ಲಿ ಉಂಟಾದ ಅತೀವೃಷ್ಟಿಯಿಂದ ಕಂಗಾಲಾಗಿದ್ದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಧಾವಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬರೋಬ್ಬರಿ 1,033 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ (ನ.27) ನಡೆದ ಕಾರ್ಯಕ್ರಮದಲ್ಲಿ ಈ ಮಹತ್ವದ ನಿರ್ಧಾರಕ್ಕೆ ಚಾಲನೆ ನೀಡಿದರು. ರಾಜ್ಯದ ಸುಮಾರು 14.24 ಲಕ್ಷ ರೈತರು ಇದರ ನೇರ ಲಾಭ ಪಡೆಯಲಿದ್ದು, ಪರಿಹಾರದ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT) ಜಮೆಯಾಗಲಿದೆ. ವಿಶೇಷವೆಂದರೆ, ಕೇಂದ್ರದ ಎನ್ಡಿಆರ್ಎಫ್ ಮಾರ್ಗಸೂಚಿಗಳಿಗಿಂತ ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರ ತನ್ನ ಸ್ವಂತ ಬೊಕ್ಕಸದಿಂದ ‘ಟಾಪ್ ಅಪ್’ ರೂಪದಲ್ಲಿ ನೀಡುತ್ತಿದೆ.
ಪರಿಹಾರದ ಮೊತ್ತದಲ್ಲಿ ಭಾರಿ ಏರಿಕೆ: ಹಿಂದೆಂದಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರವನ್ನು ಈ ಬಾರಿ ಘೋಷಿಸಲಾಗಿದೆ. ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಅನ್ವಯವಾಗುವಂತೆ ಪರಿಹಾರದ ದರಗಳನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ಮಳೆಯಾಶ್ರಿತ ಬೆಳೆಗಳು: ಪ್ರತಿ ಹೆಕ್ಟೇರ್ಗೆ ಹಳೆಯ ದರ 8,500 ರೂ. ಇದ್ದು, ಈಗ ಅದನ್ನು 17 ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ.
ನೀರಾವರಿ ಬೆಳೆಗಳು: ಪ್ರತಿ ಹೆಕ್ಟೇರ್ಗೆ 25,500 ರೂ. ಪರಿಹಾರ ಸಿಗಲಿದೆ.
ತೋಟಗಾರಿಕೆ/ಬಹುವಾರ್ಷಿಕ ಬೆಳೆಗಳು: ಪ್ರತಿ ಹೆಕ್ಟೇರ್ಗೆ 31 ಸಾವಿರ ರೂ. ಗಳಿಗೆ ಏರಿಕೆ ಮಾಡಲಾಗಿದೆ.
ಈಗಾಗಲೇ ಎಸ್ಡಿಆರ್ಎಫ್ ಮಾನದಂಡದಡಿ 1,218.03 ಕೋಟಿ ರೂ. ವಿತರಿಸಲಾಗಿದ್ದು, ಈಗ ರಾಜ್ಯ ಸರ್ಕಾರ ನೀಡುತ್ತಿರುವ ಹೆಚ್ಚುವರಿ 1,033.60 ಕೋಟಿ ರೂ. ಸೇರಿದಂತೆ ಒಟ್ಟು 2,251.63 ಕೋಟಿ ರೂ. ರೈತರ ಕೈ ಸೇರಲಿದೆ.
ಮಳೆರಾಯನ ಆರ್ಭಟ ಮತ್ತು ಬೆಳೆ ನಾಶದ ಚಿತ್ರಣ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಯಿತಾದರೂ, ಅತಿಯಾದ ಮಳೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿತು. ರಾಜ್ಯದಲ್ಲಿ ಒಟ್ಟು 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.
ಆದರೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸುರಿದ ಭಾರೀ ಮಳೆಗೆ ಅಂದಾಜು 14.58 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದರ ಒಟ್ಟು ನಷ್ಟದ ಮೌಲ್ಯವೇ ಸುಮಾರು 10,748 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ, ಕೊಯ್ಲಿಗೆ ಬಂದಿದ್ದ ಹೆಸರು ಕಾಳು, ತೊಗರಿ, ಹತ್ತಿ ಮತ್ತು ಮೆಕ್ಕೆಜೋಳದಂತಹ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಪಾರದರ್ಶಕತೆಗೆ ಆದ್ಯತೆ: ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲು ಸರ್ಕಾರ ‘ಫ್ರೂಟ್ಸ್’ (FRUITS) ತಂತ್ರಾಂಶವನ್ನು ಬಳಸಿಕೊಂಡಿದೆ. ಗ್ರಾಮವಾರು ಪಟ್ಟಿಯನ್ನು ಪ್ರಕಟಿಸಿ, ಸಾರ್ವಜನಿಕ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಅರ್ಹ ರೈತರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ, ಹೆಚ್ಚಿನ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಸಿಎಂ, ಎನ್ಡಿಆರ್ಎಫ್ ಅಡಿಯಲ್ಲಿ ಇನ್ನೂ 614.90 ಕೋಟಿ ರೂ. ಹಾಗೂ ಮೂಲಸೌಕರ್ಯ ಹಾನಿ ಪರಿಹಾರಕ್ಕೆ 1,521 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.























