Home Advertisement
Home ಸುದ್ದಿ ರಾಜ್ಯ ರಾಜ್ಯದ ರೈತರಿಗೆ ಗುಡ್‌ನ್ಯೂಸ್‌: ತೊಗರಿ ಖರೀದಿಗೆ ಕೇಂದ್ರ ಅಸ್ತು

ರಾಜ್ಯದ ರೈತರಿಗೆ ಗುಡ್‌ನ್ಯೂಸ್‌: ತೊಗರಿ ಖರೀದಿಗೆ ಕೇಂದ್ರ ಅಸ್ತು

0
58

ಬೆಂಗಳೂರು/ನವದೆಹಲಿ: ಕರ್ನಾಟಕದ ತೊಗರಿ ರೈತರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿಯೊಂದು ದೊರೆತಿದೆ. ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ತೊಗರಿ ಬೆಳೆಗಾರರಿಗೆ ದೊಡ್ಡ ನಿರಾಳತೆಯಾಗುವಂತೆ, ಬೆಂಬಲ ಬೆಲೆ ಯೋಜನೆ (PSS) ಅಡಿಯಲ್ಲಿ ರಾಜ್ಯದಿಂದ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಅನುಮೋದನೆ ನೀಡಿದೆ.

ಈ ಕುರಿತು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಮಾಹಿತಿ ನೀಡಿದ್ದಾರೆ, “ಕರ್ನಾಟಕ ರೈತರ ಹಿತಕ್ಕಾಗಿ ನನ್ನ ವಿಶೇಷ ಮನವಿಯ ಮೇರೆಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ. NAFED ಮತ್ತು NCCF ಮೂಲಕ MSP ದರದಲ್ಲಿ ತೊಗರಿ ಖರೀದಿ ಪ್ರಾರಂಭವಾಗಲಿದೆ” ಎಂದು ಹೇಳಿದ್ದಾರೆ.

ಪ್ರಲ್ಹಾದ ಜೋಶಿಯ ಮನವಿಗೆ ತಕ್ಷಣ ಸ್ಪಂದನೆ: ಡಿಸೆಂಬರ್ 4ರಂದು ಪ್ರಲ್ಹಾದ ಜೋಶಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದು ತೊಗರಿ ಬೆಲೆ ಕುಸಿತ ಹಾಗೂ ರೈತರ ನಷ್ಟ ಕುರಿತು ತುರ್ತು MSP ಖರೀದಿ ಅಗತ್ಯ ಎಂಬ ವಿಚಾರಗಳನ್ನು ಗಮನಕ್ಕೆ ತಂದಿದ್ದರು.

ಈ ಮನವಿಗೆ ಉತ್ತರವಾಗಿ ಕೇಂದ್ರ ಕೃಷಿ ಸಚಿವರು ಕೇವಲ 5-6 ದಿನಗಳಲ್ಲೇ ಅನುಮೋದನೆ ನೀಡಿದ್ದು, ಡಿಸೆಂಬರ್ 10ರಂದು ರಾಜ್ಯ ಸರ್ಕಾರಕ್ಕೆ ಅಧಿಕೃತ ಪತ್ರ ಕಳುಹಿಸಲಾಗಿದೆ.

2025-26ರ ಖಾರಿಫ್ ಋತುವಿನಲ್ಲಿ ತೊಗರಿ ಖರೀದಿಗಾಗಿ ಬೆಲೆ ಬೆಂಬಲ ಯೋಜನೆ (PSS) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿ.10ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9,67,000 ಮೆಟ್ರಿಕ್‌ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ ಎಂದು ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ರೈತರಿಗೆ ದೊಡ್ಡ ನಿರಾಳತೆ: ತೊಗರಿ ಬೆಲೆ ಅತೀ ಕಡಿಮೆಯಾಗಿರುವ ಈ ಸಮಯದಲ್ಲಿ ಕೇಂದ್ರ ಸರ್ಕಾರದ ತೀರ್ಮಾನವು ರಾಜ್ಯದ ರೈತರಿಗೆ ಮಹತ್ತರ ಆರ್ಥಿಕ ಬಲ ನೀಡಲಿದೆ. ಹವಾಮಾನ ವ್ಯತ್ಯಾಸ, ಮಾರುಕಟ್ಟೆ ಕುಸಿತ ಮತ್ತು ಸಾಲದ ಒತ್ತಡ ಎದುರಿಸುತ್ತಿದ್ದ ರೈತರಿಗೆ ಈ ನಿರ್ಧಾರ ಮಹತ್ತರ ಸಹಾಯಕವಾಗಿದೆ.

Previous articleಶಿವಮೊಗ್ಗ ಜಿಲ್ಲೆಯ ರೈಲು ಸಂಪರ್ಕಕ್ಕೆ ಐತಿಹಾಸಿಕ ಬಲ!
Next articleಜನೌಷಧಿ ಕೇಂದ್ರ ಮುಚ್ಚುವ ಸರ್ಕಾರದ ಆದೇಶಕ್ಕೆ ತಡೆ: ಹೈಕೋರ್ಟ್